ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯಿದೆ, ಸಫಾಯಿ ಕರ್ಮಚಾರಿಗಳ ಸಮೀಕ್ಷೆಯಲ್ಲಿ ಸಂಘಟನೆಯ ನಾಯಕರು ಶಿಸ್ತನ್ನು ರೂಪಿಸಿಕೊಳ್ಳಬೇಕು. ಆಡಳಿತಾತ್ಮಕ ವ್ಯವಸ್ಥೆಯಲ್ಲಿ ನಾವು ಯಾವ ರೀತಿ ಟ್ಯಾಕಲ್ ಮಾಡಬೇಕೆಂದು ಮೈಗೂಡಿಸಿಕೊಳ್ಳಬೇಕು ಎಂದು ಚಿಂತಕ ಕೆ ದೊರೈರಾಜು ಸಲಹೆ ನೀಡಿದರು.
ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಪರ್ಯಾಯ ಕಾನೂನು ವೇದಿಕೆ ವತಿಯಿಂದ ತುಮಕೂರು ನಗರದ ಸಮೃದ್ಧಿ ಗ್ರಾಂಡ್ ಹೋಟೆಲ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತುಮಕೂರು ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ, ಪಂಗಡ ಸಮುದಾಯಕ್ಕೆ ಸೇರಿದ ಕಾನೂನುಗಳ ಅನುಷ್ಠಾನ ಕುರಿತ ಸಂಶೋಧನಾ ವರದಿ ಬಿಡುಗಡೆ ಮತ್ತು ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮೊದಲು ಸೂಕ್ಷ್ಮ ಸಂವೇದಿ ಆಡಳಿತ ವ್ಯವಸ್ಥೆ ಇತ್ತು. ಈಗ ಅಂತಹ ಆಡಳಿತ ವ್ಯವಸ್ಥೆ ಇಲ್ಲ. ಹೋರಾಟಕ್ಕೆ ಶಕ್ತಿ ನೀಡಲು ಇಂತಹ ಅಂಕಿಅಂಶಗಳು ಅಗತ್ಯವಿದೆ. ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಬದಲಾದ ರಾಜಕೀಯ ವ್ಯವಸ್ಥೆಯನ್ನು ವೈದಿಕ ಮನೋಭೂಮಿಕೆಯಲ್ಲಿ ಜನಪ್ರತಿನಿಧಿಗಳು ಕಾರ್ಯ ನಿರ್ವಹಿಸುತ್ತಿದ್ದರೆ ಬದಲಾದ ಸಾಮಾಜಿಕ ವ್ಯವಸ್ಥೆ ಮನುವಾದ ಇಡೀ ಪ್ರಭುತ್ವವೇ ಕಾನೂನು ಹಾದಿಯಲ್ಲಿ ಸೋಲುವಂತೆ ಮಾಡಿ ಕೆಳಜಾತಿ ಜನರಿಗೆ ಭೂಮಿ ದಕ್ಕದಂತೆ ಮಾಡಲಾಗಿದೆ. ಆರ್ಥಿಕ ವ್ಯವಸ್ಥೆ ಬಂಡವಾಳ ಶಾಹಿಗಳಿಗೆ ಅನುಕೂಲವಾಗುವಂತೆ ಆಡಳಿತ ವ್ಯವಸ್ಥೆಯನ್ನು ರೂಪಿಸಲಾಗಿದೆ. ಆದ್ದರಿಂದ ಈ ಸಾಮಾಜಿಕ ವ್ಯವಸ್ಥೆಯನ್ನು ಮಣಿಸಲು ನಮ್ಮ ನಿರಂತರ ಪ್ರಯತ್ನ ಇರಬೇಕು. ಇದರಿಂದ ಸಾಮಾಜಿಕ ನ್ಯಾಯ ಮತ್ತು ಬದಲಾವಣೆಗೆ ದಾರಿಯಾಗುತ್ತದೆ ಎಂದರು.
ಎಡಿಸಿ ಡಾ.ತಿಪ್ಪೇಸ್ವಾಮಿ ಮಾತನಾಡಿ, ಎಸ್ಸಿ, ಎಸ್ಟಿ ಜನರು ಭೂ ಮಂಜೂರಾತಿ ಅಥವಾ ಸುಧಾರಣೆಯಲ್ಲಿ ಭೂಮಿ ಪಡೆಯಬೇಕಾದರೆ ದಾಖಲಾತಿಗಳ ಕೊರತೆ ಎದ್ದು ಕಾಣುತ್ತದೆ. ಮೇಲಿನ ಹಂತದಲ್ಲಿ ನಮ್ಮಿಂದ ದೊರೆಯುವ ಸ್ಪಂದನೆ ಕೆಳ ಹಂತದಲ್ಲಿ ದೊರೆಯುವುದಿಲ್ಲ. ಇದರಿಂದ ನಮ್ಮ ಜನರಿಗೆ ಸೋಲಾಗುತ್ತಿದೆ. ಇದಕ್ಕೆ ಕಾರಣಗಳನ್ನು ಹುಡುಕಬೇಕಾಗಿದೆ.ಆದರೆ ಕಳೆದ ಒಂದುವರೆ ವರ್ಷಗಳಿಂದ ಜಿಲ್ಲೆಯಲ್ಲಿ ನಾನು ಅಪರ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು ಕಂದಾಯ ಗ್ರಾಮ, ಪೋಡಿ, ಮುಕ್ತ ಗ್ರಾಮ, ಪೌತಿ ವಾರಸುದಾರಿಕೆ, 94ಸಿ/94ಸಿಸಿ ಮತ್ತು ಭೂಒಡೆತನ ಯೋಜನೆಗಳು ಕಾಯಿದೆಗಳ ನಿಯಮಗಳ ಅನುಷ್ಠಾನದಲ್ಲಿ ಕರ್ನಾಟಕ ರಾಜ್ಯಕ್ಕೆ ತುಮಕೂರು ಜಿಲ್ಲೆ ಮೊದಲ ಸ್ಥಾನದಲ್ಲಿ ಮಾಧರಿಯಾಗಿದೆ ಎಂದು ಹೇಳಿದರು.
ಸಂಶೋಧಕ ಡಾ.ಸಿದ್ದಾರ್ಥ್ ಜೋಶಿ, ಉಪವಿಭಾಗಧಿಕಾರಿ ಗೋಟೂರು ಶಿವಪ್ಪ, ನರಸೀಯಪ್ಪ. ಬೆಲ್ಲದಮಡು ಕೃಷ್ಣಪ್ಪ, ಎ.ನರಸಿಂಹಮೂರ್ತಿ, ಕೊಟ್ಟ ಶಂಕರ್, ಅನುಪಮಾ, ಈ.ಶಿವಣ್ಣ, ದೀಪಿಕಾ, ಚೋಳೂರು ಶಿವನಂಜಪ್ಪ, ಭರತ್ ಬೆಲ್ಲದಮಡು, ರಂಜನ್, ಅರುಣ್. ತಿರುಮಲಯ್ಯ, ಕೃಷ್ಣಮೂರ್ತಿ. ಪಿ.ಎನ್ರಾಮಯ್ಯ ಇದ್ದರು.


