ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ ಸಫಾಯಿ ಕರ್ಮಚಾರಿಗಳ ಸೇವಾ ರಕ್ಷಣೆ, ಕುಟುಂಬ ರಕ್ಷಣೆಯನ್ನು ಸರ್ಕಾರ ಮಾಡಬೇಕು. ಅವರಿಗೆ ಸಿಗಬೇಕಾದ ಮೂಲ ಸೌಲಭ್ಯಗಳನ್ನು ಒದಗಿಸಬೇಕು ಎಂದು ಪ್ರಗತಿಪರ ಚಿಂತಕ ಕೆ. ದೊರೈರಾಜ್ ಹೇಳಿದರು.
ಸಫಾಯಿ ಕರ್ಮಚಾರಿ ಕಾವಲು ಸಮಿತಿ ತುಮಕೂರಿನ ಮಹಾನಗರ ಪಾಲಿಕೆ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಬಾಬೂ ಜಗಜೀವನರಾಮ್ ಜಯಂತಿ ಆಚರಣೆ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮಲ್ಲಿ ಎಲ್ಲದಕ್ಕೂ ಕಾನೂನು ಮಾಡಬೇಕು, ಕಾನೂನು ಮಾಡದೆ ಪಾಲನೆ ಆಗುವುದಿಲ್ಲ. ಅಸ್ಪೃಶ್ಯತೆ ವಿರುದ್ಧ ಕಾನೂನು ಮಾಡದಿದ್ದರೆ ಅದು ಯಾವ ಮಟ್ಟಕ್ಕೆ ಹೋಗುತ್ತಿತ್ತೊ ಹೇಳಲಾಗದು. ನಮ್ಮ ಸಮಸ್ಯೆಗಳನ್ನು ಕಣ್ಣು, ಕಿವಿ ಇಲ್ಲದ ಸರ್ಕಾರಗಳಿಗೆ ತಲುಪಿಸಬೇಕು. ಸರ್ಕಾರಗಳನ್ನು ಎಚ್ಚರಿಸಿ ಕೆಲಸ ಮಾಡಿಸಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ ಎಂದು ತಿಳಿಸಿದರು.
ಸಣ್ಣಪುಟ್ಟ ಬೇಡಿಕೆಗಳಿಗೆ ಹತ್ತಾರು ವರ್ಷ ಹೋರಾಟ ಮಾಡಬೇಕಾಗುತ್ತದೆ. ನಮ್ಮ ಸವಲತ್ತು ಪಡೆಯಬೇಕಾದರೆ ಹೋರಾಟ ಅನಿವಾರ್ಯ. ಅತ್ಯಂತ ಅಪಾಯಕಾರಿ ಕೆಲಸ ಮಾಡುತ್ತಿರುವ ಸಫಾಯಿ ಕರ್ಮಚಾರಿಗಳಿಗೆ ರಕ್ಷಣೆ, ಅವರಿಗೆ ಬೇಕಾದ ಸವಲತ್ತು ಸರ್ಕಾರ ಮಾಡಿಕೊಡಬೇಕು. ಮೊದಲು ಅವರಿಗೆ ಮನೆಗಳನ್ನು ಕೊಡಬೇಕು. ಅಗತ್ಯ ಸೌಕರ್ಯ ಒದಗಿಸುವಲ್ಲಿ ತಾರತಮ್ಯ ಮಾಡಬಾರದು ಎಂದು ಸರ್ಕಾರವನ್ನು ಒತ್ತಾಯಿಸಿದರು.
ತುಮಕೂರು ನಗರಸಭೆ ಮಾಜಿ ಸದಸ್ಯ ಬಾಬೂ ಜನಜೀವನರಾಮ್ ಪ್ರಶಸ್ತಿ ಪುರಸ್ಕೃತ ನರಸೀಯಪ್ಪ ಮಾತನಾಡಿ, ಡಾ.ಅಂಬೇಡ್ಕರ್ ಅವರು ಸಂವಿಧಾನ ಕೊಟ್ಟ ಕಾರಣ ನಾವು ಈ ಸ್ಥಿಯಲ್ಲಿದ್ದೇವೆ. ಸಫಾಯಿ ಕರ್ಮಚಾರಿಗಳು ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಉನ್ನತ ಸ್ಥಾನ ಗಳಿಸಲು ಅವಕಾಶ ಮಾಡಿಕೊಡಿ. ಇಂದು ಹಲವು ಸಮಸ್ಯೆಗಳಿಗೆ ಶಿಕ್ಷಣವೇ ಪರಿಹಾರ. ಡಾ. ಅಂಬೇಡ್ಕರ್ ಅವರೂ ಶಿಕ್ಷಣದ ಮಹತ್ವವನ್ನು ಸಾರಿದ್ದಾರೆ ಎಂದರು.
ಪರಿಶಿಷ್ಟ ಜಾತಿ ಒಳಮೀಸಲಾತಿ ಹೋರಾಟ ಸಮಿತಿ ಜಿಲ್ಲಾದ್ಯಕ್ಷ ವೈ.ಕೆ. ಬಾಲಕೃಷ್ಣ ಮಾತನಾಡಿ, ಸಮಾಜದ ಎರಡು ಕಣ್ಣುಗಳಂತಿರುವ ಇಬ್ಬರು ಮಹನೀಯರ ಜಯಂತಿಯನ್ನು ಇಂದು ಆಚರಿಸುತ್ತಿದ್ದೇವೆ. ಇಬ್ಬರೂ ಸಾಮಾಜಿಕ ಬದಲಾವಣೆಯ ಕ್ರಾಂತಿಕಾರರು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಟ್ಟು ಈ ಮಹನೀಯರ ಹೋರಾಟದ ಬದುಕನ್ನು ಪರಿಚಯಿಸಿದರೆ ಇವರ ಜಯಂತಿ ಆಚರಣೆಗೆ ಅರ್ಥ ಬರುತ್ತದೆ ಎಂದು ತಿಳಿಸಿದರು.
ಸಫಾಯಿ ಕರ್ಮಚಾರಿ ಕಾವಲು ಸಮಿತಿ ರಾಜ್ಯ ಸಂಚಾಲಕ ಕೆ.ಹೆಚ್. ಓಬಳೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಗರಪಾಲಿಕೆ ಕಾರ್ಯಪಾಲಕ ಇಂಜಿನಿಯರ್ ಬಿ.ಜೆ. ವಿನಯ್ಕುಮಾರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಎ. ಪ್ರವೀಣ್ಕುಮಾರ್, ಎಸ್.ಹೆಚ್. ಚಂದ್ರಪ್ಪ ಭಾಗವಹಿಸಿದ್ದರು.


