ತುಮಕೂರು ಜಿಲ್ಲೆಯಲ್ಲಿ ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸಲು ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕರ್ನಾಟಕ ಒಲಂಪಿಕ್ ಅಸೋಸಿಯೇಷನ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ ತಿಳಿಸಿದ್ದಾರೆ.
ತುಮಕೂರಿನ ಮಹಾತ್ಮಾಗಾಂಧಿ ಕ್ರೀಡಾಂಗಣದ ಆವರಣದಲ್ಲಿರುವ ಡಾ.ಜಿ.ಪರಮೇಶ್ವರ್ ಒಳಾಂಗಣ ಕ್ರೀಡಾಂಗಣದಲ್ಲಿ ತುಮಕೂರು ಜಿಲ್ಲಾ ಬಾಸ್ಕೆಟ್ ಬಾಲ್ ಅಸೋಸಿಯೇಶನ್ ವತಿಯಿಂದ ಆಯೋಜಿಸಿದ್ದ ಬಾಸ್ಕೆಟ್ ಬಾಲ್ ಬೇಸಿಗೆ ಶಿಬಿರ ಉದ್ಟಾಟಿಸಿ ಮಾತನಾಡಿದ ಅವರು, ಜಿಲ್ಲಾಡಳಿತದ ಒತ್ತಾಸೆಯ ಫಲವಾಗಿ ಹೆಚ್ಚು ಹೆಚ್ಚು ಕ್ರೀಡಾ ಚಟುವಟಿಕೆಗಳು ಆರಂಭಗೊಂಡಿವೆ ಎಂದು ಹೇಳಿದರು.
ಮಹಾತ್ಮಗಾಂಧಿ ಕ್ರೀಡಾಂಗಣವನ್ನು ಹೊಸದಾಗಿ ಸ್ಮಾರ್ಟ್ ಸಿಟಿ ವತಿಯಿಂದ ನಿರ್ಮಿಸಿದ ಸಂದರ್ಭದಲ್ಲಿ ಹಳೆಯ ಬಾಸ್ಕೆಟ್ ಬಾಲ್ ಅಂಕಣವನ್ನು ತೆರವುಗೊಳಿಸಲಾಗಿತ್ತು. ತುಮಕೂರು ಬಾಸ್ಕೆಟ್ ಬಾಲ್ ಅಸೋಸಿಯೇಷನ್ ಕೊರಿಕೆ ಮೇರೆಗೆ ಸುಮಾರು ರೂ.10 ಲಕ್ಷ ವೆಚ್ಚದಲ್ಲಿ ಹೊಸದಾಗಿ ಬಾಸ್ಕೆಟ್ ಬಾಲ್ ಅಂಕಣ ಸಿದ್ದಪಡಿಸಿ ನೀಡಿದ್ದೇವೆ. ಸಿಮೆಂಟ್ ಅಂಕಣ ಜಾರುತ್ತಿರುವ ಹಿನ್ನೆಲೆಯಲ್ಲಿ ಸಿಂಥೆಟಿಕ್ ಬಣ್ಣ ಮಾಡಿಸಿಕೊಡಲು ಅಸೋಸಿಯೇಷನ್ ಪದಾಧಿಕಾರಿಗಳು ಮನವಿ ಮಾಡಿದ್ದಾರೆ. ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಮೂಲಕ ಶೀಘ್ರವಾಗಿ ಸಿಂಥೆಟಿಕ್ ಕೋರ್ಟ್ ಗೆ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ತುಮಕೂರು ಅಮಾನಿಕೆರೆಯಲ್ಲಿ ಕಯಾಕಿಂಗ್ ತರಬೇತಿ ಸಹ ಆರಂಭಗೊಂಡಿದೆ. ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ನ ನುರಿತ ತಜ್ಞರು ತರಬೇತಿ ನೀಡುತ್ತಿದ್ದಾರೆ. ಹಾಗೆಯೇ ಬಾಸ್ಕೆಟ್ ಬಾಲ್ ಬೇಸಿಗೆ ಶಿಬಿರ ಅರಂಭಗೊಂಡಿದೆ. ನೂರಾರು ಮಕ್ಕಳು ಮೊಬೈಲ್ ಬಿಟ್ಟು ಅಂಕಣಕ್ಕೆ ಇಳಿದಿರುವುದು ಒಳ್ಳೆಯ ಬೆಳವಣಿಗೆ. ಈ ಉತ್ಸಾಹ ಮತ್ತು ಆಸಕ್ತಿಯನ್ನು ಹೆಚ್ಚು ಮಾಡಲು ಜಿಲ್ಲಾಡಳಿತ ಎಲ್ಲಾ ಕ್ರಮಗಳನ್ಬು ಮುಂದಿನ ದಿನಗಳಲ್ಲಿ ಕೈಗೊಳ್ಳಲಿದೆ ಎಂದು ತಿಳಿಸಿದರು.
ತುಮಕೂರು ಜಿಲ್ಲಾ ಬಾಸ್ಕೆಟ್ ಬಾಲ್ ಅಸೋಸಿಯೇಷನ್ ನ ಅನಿಲ್ ಕುಮಾರ್ ಮಾತನಾಡಿ, ಜಿಲ್ಲಾಡಳಿತದ ನೆರವಿನಿಂದ ಎಂಟು ವರ್ಷಗಳ ನಂತರ ಬಾಸ್ಕೆಟ್ ಬಾಲ್ ಅಂಕಣ ಆಟಗಾರರಿಗೆ ದೊರೆತಿದೆ. ಇದಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಅಸೋಸಿಯೇಷನ್ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ. ಬಾಸ್ಕೆಟ್ ಬಾಲ್ ಬೇಸಿಗೆ ಶಿಬಿರದಲ್ಲಿ 6 ರಿಂದ 16 ವರ್ಷ ವಯಸ್ಸಿನ 35ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದು, ಹಿರಿಯ ಆಟಗಾರರು ತರಬೇತಿ ನೀಡಲಿದ್ದಾರೆ. ತುಮಕೂರು ಬಾಸ್ಕೆಟ್ ಬಾಲ್ ಅಸೋಸಿಯೇಷನ್ ಎಲ್ಲಾ ವಯೋಮಾನದ ಬಲಿಷ್ಠ ತಂಡ ಕಟ್ಟಲು ಸಹಕಾರಿಯಾಗಲಿದೆ ಎಂದರು. ಇದಕ್ಕೆ ಸಹಕಾರ ನೀಡಿದ ಅಸೋಸಿಯೇಷನ್ ನ ಎಲ್ಲಾ ಸದಸ್ಯರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಬೋರ್ಡ್ ಸದಸ್ಯರಾದ ಮಧುಸೂಧನ್.ಬಿ, ರಕ್ಷಿತ ವಿ., ಆರ್.ಕಾರ್ತಿಕ್ ಗೌಡ, ಹರ್ಷ ಮತ್ತು ಸಾಗರ್.ಆರ್ ಇದ್ದರು.


