ದಾರಿ ತಪ್ಪುತ್ತಿರುವ ಇಂದಿನ ಯುವ ಪೀಳಿಗೆಗೆ ಮಹನೀಯರ ಮತ್ತು ಸಾಧಕರ ವಿಚಾರಧಾರೆಗಳು ತುಂಬಾ ಪ್ರಸ್ತುತವಾಗುತ್ತಿದ್ದು, ಈ ವಿಚಾರಧಾರೆಗಳ ಮನನದಿಂದಲೇ ಯುವ ಪೀಳಿಗೆಯನ್ನು ಸರಿ ದಾರಿಗೆ ತರುವ ಪ್ರಯತ್ನ ಮಾಡಬೇಕಿದೆ ಎಂದು ಲೇಖಕಿ ಬಾ.ಹ.ರಮಾಕುಮಾರಿ ತಿಳಿಸಿದರು.
ವರದಕ್ಷಿಣೆ ವಿರೋಧಿ ವೇದಿಕೆ-ಸಾಂತ್ವನ ಕೇಂದ್ರ ತುಮಕೂರಿನಲ್ಲಿ ಅಂಬೇಡ್ಕರ್ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಅಂಬೇಡ್ಕರ್ ಚಿಂತನೆ ಮತ್ತು ಸವಾಲುಗಳು ಕುರಿತು ಚರ್ಚೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ಯುವ ಜನತೆಯ ನಡವಳಿಕೆಗಳನ್ನು ಗಮನಿಸಿದರೆ ಮುಂದೆ ನಮ್ಮ ಸಮಾಜ ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂಬ ಆತಂಕ ಎದುರಾಗುತ್ತದೆ. ಈ ನಿಟ್ಟಿನಲ್ಲಿ ಹಿರಿಯರ, ದಾರ್ಶನಿಕರ ವಿಚಾರಧಾರೆಗಳನ್ನು ಹೆಚ್ಚು ಹೆಚ್ಚು ಸಮಾಜಕ್ಕೆ ತಲುಪಿಸುವ ಪ್ರಯತ್ನಗಳು ನಿರಂತರವಾಗಿ ನಡೆಯಬೇಕು ಎಂದರು.
ಡಾ.ಬಿ.ಆರ್.ಅAಬೇಡ್ಕರ್, ಬಾಬು ಜಗಜೀವನರಾಂ ಇಂತಹ ಮಹನೀಯರೆಲ್ಲ ಇಡೀ ಸಮಾಜದ ಒಳಿತಿಗೆ ತಮ್ಮ ಬದುಕು ಮೀಸಲಿಟ್ಟರು. ಆದರೆ ಈಗಿನ ಆಡಳಿತಗಾರರಲ್ಲಿ ಸಮಾಜದ ಭವಿಷ್ಯದ ದೃಷ್ಟಿಕೋನವೇ ಇಲ್ಲ. ಸ್ವಾರ್ಥಪರ ಬದುಕು ಮತ್ತು ವೈಯಕ್ತಿಕ ಲಾಲಸೆಯಿಂದಾಗಿ ಉತ್ತಮ ಸಮಾಜ ಮುಂದಿನ ದಿನಗಳಲ್ಲಿ ಮತ್ತಷ್ಟು ಹದಗೆಟ್ಟು ಹೋಗುವ ಆತಂಕ ನಮ್ಮ ಕಣ್ಣೆದುರು ಇದೆ. ಈ ಸಮಾಜವನ್ನು ರಕ್ಷಿಸುವ ಕೆಲಸ ಯುವಕರಿಂದ ಆಗಬೇಕಾಗಿದ್ದು, ಅವರಲ್ಲಿ ಕೆಟ್ಟ ಮನೋಭಾವ ತುಂಬುವ ಬದಲು ಒಳ್ಳೆಯ ವಿಚಾರ ಧಾರೆಗಳನ್ನು ತುಂಬಬೇಕಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಲೇಖಕಿ ಎಂ.ಸಿ.ಲಲಿತ ಮಾತನಾಡಿ, ನಮ್ಮ ಸಮಾಜ ಬಹು ಜಾತಿ ಪದ್ಧತಿಯಿಂದಲೇ ಕೆಟ್ಟ ಹೆಸರು ಪಡೆದುಕೊಂಡಿದೆ. ಜಾತಿಯ ವಿಷ ಎಲ್ಲ ಕಡೆ ಪಸರಿಸಿದ್ದು, ಇದರಿಂದಾಗಿ ಮನಸ್ಸುಗಳು ಕೆಡುತ್ತಿವೆ. ಜಾತಿ, ಮತ, ಧರ್ಮ ಬಿಟ್ಟು ಮಾನವ ಕುಲದ ಬಗ್ಗೆ ಯೋಚಿಸಿದಾಗ ಸಮಾಜವನ್ನು ಉತ್ತಮ ಸ್ಥಿತಿಗೆ ತರಲು ಸಾಧ್ಯವಿದೆ ಎಂದು ತಿಳಿಸಿದರು.
ಈಗ ಎಲ್ಲ ಕಡೆಯೂ ಜಾತಿ ಸಂಘಟನೆಗಳು ತುಂಬಾ ಪ್ರಬಲವಾಗುತ್ತಿವೆ. ಇದು ಒಂದು ರೀತಿಯಲ್ಲಿ ಸಕಾರಾತ್ಮಕವಾದರೂ ಸಮಾಜದ ಅಭಿವೃದ್ಧಿಯ ದೃಷ್ಟಿಯಿಂದ ಒಳ್ಳೆಯದಂತೂ ಅಲ್ಲ. ನಾವೆಲ್ಲರೂ ಜಾತಿಯನ್ನು ಬದಿಗಿಟ್ಟು ಇಡೀ ಸಮಾಜದ ಬಗ್ಗೆ ಯೋಚಿಸಬೇಕಿದೆ. ಅಂಬೇಡ್ಕರ್ ಅವರೆಲ್ಲ ಹಾಗೆ ಯೋಚಿಸಿದ ಪರಿಣಾಮವಾಗಿಯೇ ಇಂದು ನಾವು ಒಂದು ಉತ್ತಮ ಸಂವಿಧಾನ ಪಡೆಯಲು ಸಾಧ್ಯವಾಯಿತು ಎಂದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಬಾಬು ಜಗಜೀವನರಾಂ ರಾಜ್ಯ ಪ್ರಶಸ್ತಿ ಪುರಸ್ಕೃತ ನರಸೀಯಪ್ಪ, ಮಂಡಿಪೇಟೆಯಲ್ಲಿ ಮೂಟೆ ಹೊತ್ತು ಬದುಕು ಸಾಗಿಸಿದ್ದ ನಾನು ಕ್ರಮೇಣ ಜನರ ಪ್ರೀತಿಯಿಂದ ನಗರ ಸಭೆಯ ಸದಸ್ಯನಾದೆ. ನನಗೆ ದೊರೆತ ಅಲ್ಪ ಅಧಿಕಾರದ ಅವಧಿಯಲ್ಲಿ ಸೂರು ಇಲ್ಲದವರಿಗೆ ಒಂದು ನೆಲೆ ಕಲ್ಪಿಸಲು ಪ್ರಯತ್ನಿಸಿದೆ. ಎಲ್ಲರ ಶ್ರಮದ ಫಲವಾಗಿ ಅಂಬೇಡ್ಕರ್ ನಗರ, ನಿರ್ವಾಣಿ ಲೇಔಟ್ ಇವೆಲ್ಲ ಸ್ಥಿರವಾಗಲು ಕಾರಣವಾಯಿತು ಎಂದು ಹೋರಾಟದ ದಿನಗಳನ್ನು ಸ್ಮರಿಸಿದರು.
ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ.ರಾಜಕುಮಾರ ಮಾತನಾಡಿ ಮಹಿಳೆಯರ ಸಬಲೀಕರಣ ಹಾಗೂ ಕಾನೂನುಗಳ ಉಗಮಕ್ಕೆ ಅಂಬೇಡ್ಕರ್ ಅವರ ಕೊಡುಗೆ ಅಪಾರವಿದೆ ಎಂದರು.
ವೇದಿಕೆಯ ಪದಾಧಿಕಾರಿಗಳಾದ ಎನ್.ಅಕ್ಕಮ್ಮ, ಮಮತ ರವಿಕುಮಾರ್, ಗಂಗಲಕ್ಷ್ಮಿ, ಸಾಂತ್ವನ ಕೇಂದ್ರದ ಪಾರ್ವತಮ್ಮ, ರಾಧಾಲಕ್ಷಿö್ಮ, ಮಾಣಿಕ್ಯ ಇದ್ದರು.


