ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಆಹಿತಕರ ಘಟನೆಯನ್ನು ಜಿಲ್ಲಾ ಕಾಂಗ್ರೆಸ್ ಖಂಡಿಸುತ್ತದೆ. ಕೆ.ಆರ್.ಎಸ್ ಪಕ್ಷದ ಕಾರ್ಯಕರ್ತರು ಉದ್ದೇಶ ಪೂರ್ವಕವಾಗಿ ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ಕೆಟ್ಟ ಹೆಸರು ತರಲು ಇಲ್ಲಸಲ್ಲದ ಆರೋಪ ಮಾಡುತ್ತಿದ್ದು, ಇದು ಹೀಗೆ ಮುಂದವರೆದರೆ ತಕ್ಕ ಪಾಠ ಕಲಿಸಲಾಗುವುದು ಎಂದು ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರ್ಗೌಡ ಎಚ್ಚರಿಕೆ ನೀಡಿದ್ದಾರೆ.
ತುಮಕೂರಿನ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಏಪ್ರಿಲ್ 8 ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3:30 ರವರೆಗೆ ಸುಮಾರು 750ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿ, ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಪರಿಹಾರ ಒದಗಿಸುವ ಕೆಲಸ ಮಾಡಿದ್ದಾರೆ. ಆದರೆ ಕೊನೆಯಲ್ಲಿ ಬಂದ ಕೆ.ಆರ್.ಎಸ್ ಪಕ್ಷದ ಕೆಲವರು ಉದ್ದೇಶಪೂರ್ವಕವಾಗಿಯೇ ಸಚಿವರನ್ನು ಕೆರಳಿಸುವಂತೆ ಪ್ರಶ್ನೆ ಮಾಡಿದಲ್ಲದೆ, ಅರ್ಜಿ ಪಡೆದ ಸಂಬಂಧಪಟ್ಟವರಿಗೆ ನೀಡಿದ ನಂತರ ಹೊರಡಲು ಮುಂದಾದಾಗ ಉಢಾಪೆಯಾಗಿ ವರ್ತಿಸಿ, ಕೆಟ್ಟ ಹೆಸರು ತರುವ ಕೆಲಸ ಮಾಡಿದ್ದಾರೆ. ಇದು ಖಂಡನೀಯ. ಅಲ್ಲದೆ ಸೋಷಿಯಲ್ ಮಿಡಿಯಾದಲ್ಲಿ ಇಲ್ಲಸಲ್ಲದ ಸುಳ್ಳು ಹೇಳಿ ಮನಬಂದತೆ ಟ್ರೋಲ್ ಮಾಡುತ್ತಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಕೆ.ಆರ್.ಎಸ್ ಪಕ್ಷದವರ ನಡವಳಿಕೆ ಇದೇ ರೀತಿ ಮುಂದುವರೆದರೆ ನಾವು ಕೂಡ ಎಲ್ಲೆಂದರಲ್ಲಿ ಕೆ.ಆರ್.ಎಸ್.ಪಕ್ಷದವರಿಗೆ ಘೇರಾವ್ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಮಸ್ಯೆಗಳ ಬಗ್ಗೆ ಮನವಿ ನೀಡಲು ಬಂದವರು, ಅದನ್ನು ವೀಡಿಯೋ ಮಾಡುವ ಅಗತ್ಯವೆನಿತ್ತು?, ತುಮಕೂರಿನ ಜನಸ್ಪಂದನ ಕಾರ್ಯಕ್ರಮಕ್ಕೆ ಮೈಸೂರಿನ ವ್ಯಕ್ತಿ ಬಂದ ಮನವಿ ನೀಡುವ ಅಗತ್ಯವಿದೆಯೇ? ಇದೊಂದು ಷಡ್ಯಂತ್ರವಾಗಿದೆ. ಗೃಹ ಮಂತ್ರಿಗಳಿಗೆ ಕೆಟ್ಟ ಹೆಸರು ತರಬೇಕೆಂದು ನಡೆಸಿರುವ ಹುನ್ನಾರವಾಗಿದೆ. ಇಡೀ ದಿನ ಮದ್ಯಾಹ್ನದ ಊಟವನ್ನು ಮಾಡದೆ ಜನರ ಸಂಕಷ್ಟ ಆಲಿಸಿ ಪರಿಹಾರ ಒದಗಿಸಿದ್ದರೂ, ಸಭೆ ಮುಗಿಸಿ ಹೊರಡುವಾಗ ಬಂದು ಕಿತಾಪತಿ ತೆಗೆದು ಸಾರ್ವಜನಿಕರಲ್ಲಿ ಕೆಟ್ಟ ಅಭಿಪ್ರಾಯ ಮೂಡುವಂತೆ ಮಾಡುತಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹಮದ್ ಮಾತನಾಡಿ, ಪ್ರಜಾಪ್ರಭುತ್ವದ ಅಡಿಯಲ್ಲಿ ಸರಕಾರದ ಸವಲತ್ತುಗಳಿಗೆ ಅರ್ಜಿ ಸಲ್ಲಿಸಲು ಎಲ್ಲರಿಗೂ ಅವಕಾಶವಿದೆ. ಆದರೆ ಕೆ.ಆರ್.ಎಸ್ ಪಕ್ಷದವರು ಉದ್ದೇಶ ಪೂರ್ವಕವಾಗಿಯೇ ಮೊಬೈಲ್ ಹಿಡಿದು, ಬೇಕಾಬಿಟ್ಟಿ ಮಾತನಾಡುವ ಮೂಲಕ ಗೊಂದಲ ಸೃಷ್ಟಿಸಿದ್ದಾರೆ. ಕಾನೂನಿನ ಅಡಿಯಲ್ಲಿ ಎಲ್ಲರಿಗೂ ಸಮಸ್ಯೆ ಪರಿಹಾರಕ್ಕೆ ಅವಕಾಶವಿದೆ. ಆದರೆ ಕೆ.ಆರ್.ಎಸ್ ಪಕ್ಷದ ದುಂಡಾವರ್ತನೆಯನ್ನು ಸಹಿಸುವುದಿಲ್ಲ. ನಮ್ಮ ಪಕ್ಷಕ್ಕೆ 140 ವರ್ಷಗಳ ಇತಿಹಾಸವಿದೆ. ಲಕ್ಷಾಂತರ ಕಾರ್ಯಕರ್ತರಿದ್ದೇವೆ, ತಕ್ಕ ಪಾಠ ಕಲಿಸುವುದು ಅನಿವಾರ್ಯ ಎಂದರು.
ಮುಖಂಡ ಎನ್.ಗೋವಿಂದರಾಜು ಮಾತನಾಡಿ, ಗೃಹ ಸಚಿವರ ನಲವತ್ತು ವರ್ಷಗಳ ರಾಜಕೀಯ ಜೀವನದಲ್ಲಿ ಸೌಮ್ಯ ಸ್ವಭಾವಕ್ಕೆ ಹೆಸರಾದವರು. ಜಿಲ್ಲಾ ಜನ ಸ್ಪಂದನ ಕಾರ್ಯಕ್ರಮ ಸುಗಮವಾಗಿ ನಡೆಯುತ್ತಿರುವಾಗ ಈ ರೀತಿಯ ಕಿರಿಕಿರಿ ಉಂಟು ಮಾಡುವುದು ಸರಿಯಲ್ಲ. ಇದನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್.ರಾಮಕೃಷ್ಣ ಮಾತನಾಡಿ, ದೇಶದಲ್ಲಿ ಹಲವಾರು ಸಮಸ್ಯೆಗಳಿವೆ. ಅವುಗಳನ್ನು ಬಿಟ್ಟು ಗೃಹ ಸಚಿವರನ್ನೇ ಟಾರ್ಗೆಟ್ ಮಾಡಿ, ಅವರ ತೇಜೋವಧೆಗೆ ಮುಂದಾಗಿರುವುದು ಖಂಡನೀಯ ಎಂದು ತಿಳಿಸಿದರು.
ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ, ಸರಕಾರದ ಕೆಲಸವಾಗಿರುವ ಜನಸಂಪರ್ಕ ಸಭೆ ವ್ಯವಸ್ಥಿತವಾಗಿ ನಡೆಯುತ್ತಿರುವ ಸಂದರ್ಭದಲ್ಲಿ 750 ಜನರಿಗೆ ಆಗದ ತೊಂದರೆ ಇವರಿಗೆ ಮಾತ್ರ ಆಗಿತ್ತೇ?, ಕೆ.ಆರ್.ಎಸ್ ಪಕ್ಷದ್ದು ಕೇವಲ ಗಿಮಿಕ್, ಮುಖ್ಯಮಂತ್ರಿಗಳ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅರಣ್ಯ ಸಚಿವರು, ಕಾರ್ಮಿಕ ಸಚಿವರು ಎಲ್ಲರ ಜನಸ್ಪಂದನ ಸಭೆಯಲ್ಲಿಯು ಇದೇ ರೀತಿ ವರ್ತಿಸುತಿದ್ದಾರೆ. ಅರ್ಜಿ ನೀಡುವ ಬದಲು ವಿಡಿಯೋ ಮಾಡಿ ಸೋಷಿಯೆಲ್ ಮಿಡಿಯಾದಲ್ಲಿ ಅಪಪ್ರಚಾರ ನಡೆಸುತ್ತಿರುವುದು ಸರಿಯಲ್ಲ ಎಂದರು.
ಮಾಧ್ಯಮಗೋಷ್ಠಿಯಲ್ಲಿ ಮುಖಂಡರಾದ ಸುವರ್ಣಮ್ಮ, ಎಚ್.ಸಿ.ಹನುಮಂತಯ್ಯ, ರೇವಣ್ಣ ಸಿದ್ದಯ್ಯ ಮಾತನಾಡಿದರು. ಅಲ್ಪಸಂಖ್ಯಾತರ ಘಟಕದ ಇರ್ಫಾನ್ ಅಹಮದ್, ಎಸ್ಸಿ ಸೇಲ್ನ ಲಿಂಗರಾಜು, ಬ್ಲಾಕ್ ಕಾಂಗ್ರೆಸ್ ಮುಖಂಡರಾದ ಮಹೇಶ, ಫೈಯಾಜ್, ನಾಗಲಕ್ಷ್ಮಿ ವಿಜಯಲಕ್ಷ್ಮಿ, ಸುಜಾತ, ಪಿ.ಶಿವಾಜಿ ಇದ್ದರು.


