ಮುಖ್ಯಮಂತ್ರಿ ಬದಲಾವಣೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತಂತೆ ಚರ್ಚೆಗಳು ನಡೆದಿರುವ ಬೆನ್ನೆಲ್ಲೇ ಸಹಕಾರ ಸಚಿವ ಕೆ ಎನ್ ರಾಜಣ್ಣ ಕುತೂಹಲಕಾರಿ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ.
ರಾಜ್ಯದಲ್ಲಿ ಅಧಿಕಾರ ಕೇಂದ್ರಿತ ಸ್ಥಾನಗಳು ಹೆಚ್ಚಾಗಿವೆ. ಹೀಗಾಗಿ ಜಂಜಾಟಗಳು ಹೆಚ್ಚಾಗಿವೆ. ನವೆಂಬರ್ ವೇಳೆಗೆ ಮಹತ್ವದ ಬದಲಾವಣೆಯಾಗಲಿದ್ದು, ಎಲ್ಲವೂ ಸರಿಹೋಗಲಿದೆ ಎಂದು ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದ ವೇಳೆ ಇದ್ದ ಖದರ್ ಮತ್ತು ವಾತಾವರಣ ಈಗ ಕಾಣುತ್ತಿಲ್ಲ. ಅದಕ್ಕೆ ಪ್ರಮುಖ ಕಾರಣ ಪಕ್ಷ ಮತ್ತು ಸರ್ಕಾರದಲ್ಲಿ ಇರುವ ಪವರ್ ಸೆಂಟರ್ ಗಳು. ಸದ್ಯದಲ್ಲಿಯೇ ಇವುಗಳು ಬದಲಾಗುತ್ತವೆ ಎಂದು ಹೇಳಿದರು.
ಸರ್ಕಾರ ಮತ್ತು ಪಕ್ಷದಲ್ಲಿ ಜಂಜಾಟಗಳಿವೆ. ಎಲ್ಲವನ್ನು ಸರಿದೂಗಿಸಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಹೋಗುತ್ತಿದ್ದಾರೆ. ಇದೇ ರೀತಿ ಮುಂದುವರೆಯಲು ಸಾಧ್ಯವಿಲ್ಲ. ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿದ್ದು ಸೂಕ್ತ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.
ಬರುವ ಆಗಸ್ಟ್ ನಿಂದ ನವಂಬರ್ ವೇಳೆಗೆ ಎಲ್ಲವೂ ಸರಿ ಹೋಗಲಿದೆ. ಇದರ ಸುಳಿ ಗಾಳಿ ಈಗಾಗಲೇ ಗೋಚರವಾಗಿದ್ದು ಸಾಕಷ್ಟು ಬದಲಾವಣೆಗಳು ಆಗಲಿವೆ ಎಂದು ಭವಿಷ್ಯ ನುಡಿದರು.
ಸಚಿವ ರಾಜಣ್ಣ ಅವರ ಹೇಳಿಕೆಗೆ ಸ್ಪಷ್ಟನೆ ನೀಡಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಡಳಿತದಲ್ಲಿ ನಿಯಂತ್ರಣ ಕಳೆದುಕೊಂಡಿಲ್ಲ. ಆ ಬಗ್ಗೆ ನಾನು ಏನೂ ಕೇಳಿಲ್ಲ. ನಮಗೆ ಹೈಕಮಾಂಡ್ ಇದ್ದು, ಎಲ್ಲವನ್ನೂ ನೋಡಿಕೊಳ್ಳುತ್ತದೆ’ ಎಂದು ತಿಳಿಸಿದರು.
ನಾನು ಎಲ್ಲರ ಜೊತೆ ಮಾತನಾಡುತ್ತೇನೆ. ಏನೂ ಸಮಸ್ಯೆ ಇಲ್ಲ. ಆಡಳಿತದಲ್ಲಿ ಕಂಟ್ರೋಲ್ ಕಳೆದುಕೊಂಡಿಲ್ಲ. ಮಾಧ್ಯಮದವರೇ ವಿಷಯ ದೊಡ್ಡದು ಮಾಡುತ್ತಿದ್ದಾರೆ’ ಎಂದರು.
ಶಾಸಕ ಬಿ.ಆರ್. ಪಾಟೀಲ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ‘ಪಕ್ಷದ ಅಧ್ಯಕ್ಷನಾಗಿ ವಾಸ್ತವಾಂಶ ಕೇಳಬೇಕಿತ್ತು. ಅವರಿಗೆ ಕರೆ ಮಾಡಿ ಕರೆಸಿದ್ದೆ. ಹೀಗಾಗಿ ಅವರು ಬಂದಿದ್ದರು. ಅವರ ವಿಚಾರ ಏನಿದೆ ಎಂಬುದನ್ನು ಹೇಳಿದ್ದಾರೆ’ ಎಂದರು.
ಮುಖ್ಯಮಂತ್ರಿ, ಸಚಿವ ಜಮೀರ್ ಜೊತೆ ನಾನು ಮಾತನಾಡುತ್ತೇನೆ. ವಾಸ್ತವಾಂಶ ಪರಿಶೀಲನೆ ಮಾಡುತ್ತೇನೆ. ನಮ್ಮ ಪಕ್ಷದ ವರಿಷ್ಠರು ಬರುತ್ತಿದ್ದಾರೆ. ಎಲ್ಲರ ಜೊತೆ ಮಾತನಾಡುತ್ತಾರೆ. ವಾಸ್ತವಾಂಶದ ಬಗ್ಗೆ ಮಾತನಾಡುತ್ತಾರೆೆ’ ಎಂದು ಹೇಳಿದರು.


