ಶೋಷಿತರ ಧ್ವನಿಯಾಗಿರುವ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರಿಗೆ ನೈತಿಕ ಶಕ್ತಿಯನ್ನು ತುಂಬುವ ನಿಟ್ಟಿನಲ್ಲಿ ಅಮೃತ ಮಹೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಜನಪರ ಚಿಂತಕ ದೊರೈರಾಜು ಕರೆ ನೀಡಿದರು.
ನಗರದಲ್ಲಿ ಹಮ್ಮಿಕೊಂಡಿದ್ದ ಮಾದಿಗ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಮೊದಲಿನಿಂದಲೂ ಬಡವರು, ಅಸಹಾಯಕರ ಹೋರಾಟಕ್ಕೆ ಧ್ವನಿಯಾಗಿದ್ದಾರೆ, ಸಾಮಾನ್ಯರೊಂದಿಗೆ ಬೆರೆಯುವ ಅಸಾಮಾನ್ಯ ಗುಣವನ್ನು ಹೊಂದಿರುವ ಕೆ.ಎನ್.ರಾಜಣ್ಣ ಅವರನ್ನು ಬೇರೆಯವರೊಂದಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲದಂತಹ ವ್ಯಕ್ತಿತ್ವದವರು ಎಂದರು.
ಸಹಕಾರಿ ತತ್ವವನ್ನೇ ಉಸಿರಾಗಿಸಿಕೊಂಡು ಸಹಕಾರ ರಂಗದಲ್ಲಿ ಶೋಷಿತ ಸಮುದಾಯವನ್ನು ಗುರುತಿಸಿ, ಬೆಳೆಸಿರುವ ಕೆ.ಎನ್.ರಾಜಣ್ಣ ಅವರು ಸಹಕಾರಿ ರಂಗದಲ್ಲಿಯೂ ಮೀಸಲಾತಿಯನ್ನು ತರುವ ಐತಿಹಾಸಿಕ ನಿರ್ಣಯವನ್ನು ಕೈಗೊಂಡಿದ್ದು, ದಲಿತ ಸಂಘಟನೆಗಳು ಹಾಗೂ ಯುವ ಸಮುದಾಯ ಅಮೃತ ಮಹೋತ್ಸವದಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ಸರ್ಕಾರಿ ಎಸ್ಸಿ,ಎಸ್ಟಿ ನೌಕರರ ಸಮನ್ವಯ ಸಮಿತಿ ರಾಜ್ಯ ಗೌರವಾಧ್ಯಕ್ಷ ಡಾ. ವೈ.ಕೆ.ಬಾಲಕೃಷ್ಣಪ್ಪ ಮಾತನಾಡಿ, ಶೋಷಿತ ಸಮುದಾಯದ ಮುಖಂಡರಾಗಿರುವ ಕೆ.ಎನ್.ರಾಜಣ್ಣ ಅವರಿಗೆ ಪರ್ಯಾಯ ನಾಯಕರಿಲ್ಲ, ಸಣ್ಣ, ಪುಟ್ಟ ಸಮುದಾಯಗಳನ್ನು ಗುರುತಿಸಿ ಅವಕಾಶ ನೀಡಿ ಪ್ರೋತ್ಸಾಹಿಸುವ ಜನನಾಯಕ ಎಂದು ಹೇಳಿದರು.
ಶೋಷಿತ ವರ್ಗಗಳ ಪರವಾಗಿ ಇರುವ ಕೆ.ಎನ್.ರಾಜಣ್ಣ ಅವರು ಅಧಿಕಾರಿಗಳಿರಲಿ, ಜನಸಾಮಾನ್ಯರ ತೊಂದರೆಗಳಿಗೆ ಸ್ಪಂದಿಸುವ ಮೂಲಕ ತಳ ಸಮುದಾಯಗಳ ಹಿತವನ್ನು ಕಾಯುತ್ತಿದ್ದಾರೆ. ಜಾತ್ಯತೀತವಾಗಿ, ಪಕ್ಷತೀತವಾಗಿ ನಡೆಯುತ್ತಿರುವ ಅಮೃತ ಮಹೋತ್ಸವವನ್ನು ಯಶಸ್ವಿಗೊಳಿಸುವ ಮೂಲಕ ಶೋಷಿತರ ಪರ ಹೋರಾಟವನ್ನು ಮುಂದುವರೆಸಲು ನೈತಿಕ ಶಕ್ತಿ ತುಂಬಬೇಕಿದೆ ಎಂದರು.
ನಾಗಾರ್ಜುನ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಿವನಂಜಪ್ಪ ಮಾತನಾಡಿ. ಮಾದಿಗ ಸಮುದಾಯದ ಬಗ್ಗೆ ಅತೀವ ಕಾಳಜಿ, ಪ್ರೀತಿಯುಳ್ಳ ಕೆ.ಎನ್.ರಾಜಣ್ಣ ಅವರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದಾಗಲೇ ನಾಗಾರ್ಜುನ ಪತ್ತಿನ ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕೆ 35 ಲಕ್ಷ ಸಾಲ ಮಂಜೂರು ಮಾಡಿಸಿ, ಸಮುದಾಯದ ಸಹಕಾರಿಗೆ ಸ್ವಂತ ಕಟ್ಟಡ ಹೊಂದುವ ಅವಕಾಶ ಕಲ್ಪಿಸಿದವರು ಎಂದು ಸ್ಮರಿಸಿದರು.
ಸಭೆಯಲ್ಲಿ ನಗರಸಭೆ ಮಾಜಿ ಸದಸ್ಯ ಹನುಮಂತರಾಯಪ್ಪ, ಟೂಡಾ ಮಾಜಿ ಸದಸ್ಯ ಜಯಮೂರ್ತಿ, ನಿವೃತ್ತ ತಹಶೀಲ್ದಾರ್ ಎಂ.ಸಿ.ನರಸಿಂಹಮೂರ್ತಿ, ಹೆಚ್.ಆರ್.ಬಸವರಾಜು, ಗಂಗಾಧರಪ್ಪ, ನರಸಿಂಹಯ್ಯ, ನಗರಸಭೆ ಮಾಜಿ ಸದಸ್ಯ ನರಸೀಯಪ್ಪ, ಮಾಲಣ್ಣ, ಚಂದ್ರಣ್ಣ, ಗೋಪಾಲ್ ಇದ್ದರು.


