ಭಗೀರಥ ಮಹರ್ಷಿಗಳ ತಾಳ್ಮೆ, ನಿರಂತರ ಪ್ರಯತ್ನ ನೆಮ್ಮಲ್ಲರಿಗೂ ದಾರಿ ದೀಪವಾಗಬೇಕು. ಹಿಡಿದ ಕೆಲಸವನ್ನು ಬೀಡದೆ ಸಾಧಿಸುವುದು ಎನ್ನುವುದಕ್ಕೆ ಭಗೀರಥ ಮಹರ್ಷಿಗಳು ನಿದರ್ಶನವಾಗಿದ್ದಾರೆ ಎಂದು ತುಮಕೂರು ನಗರ ಶಾಸಕ ಬಿ.ಜಿ.ಜೋತಿಗಣೇಶ್ ತಿಳಿಸಿದ್ದಾರೆ.
ತುಮಕೂರು ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತಮ್ಮ ಪೂರ್ವಜರ ಮುಕ್ತಿಗೋಸ್ಕರ ಶಿವನ ಕುರಿತು ತಪಸು ಮಾಡಿ, ಶಿವನಿಂದ ಗಂಗೆಯನ್ನು ಬಿಡಿಸಿ ಭೂ ಲೋಕಕ್ಕೆ ಕರೆತಂದವರು, ಇಂತಹ ಮಹಾಪುರುಷರ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.
ತಹಶೀಲ್ದಾರ್ ರಾಜೇಶ್ವರಿ ಮಾತನಾಡಿ, ಭಾರತೀಯ ಪುರಾಣದಲ್ಲಿ ಭಗೀರಥ ಮಹರ್ಷಿಗಳಿಗೆ ತನ್ನದೇ ಆದ ವಿಶೇಷ ಸ್ಥಾನಮಾನವಿದೆ. ಜೀವಜಲ, ಗಂಗಾ ಮಾತೆ ಎಂದು ಪೂಜಿಸುವ ಗಂಗೆಯನ್ನು ಭೂಮಿಗೆ ತಂದುಕೊಟ್ಟುವರು ಭಗೀರಥ ಮಹರ್ಷಿಗಳು, ಇಂದು ನೀರಿಲ್ಲದೆ ಒಂದು ದಿನ ಕಳೆಯಲು ಸಾಧ್ಯವಿಲ್ಲ. ಭಗೀರಥ ಮಹರ್ಷಿಗಳ ಶ್ರದ್ದೆ, ಭಕ್ತಿ, ನಿಷ್ಠೆ, ತಾಳ್ಮೆ ಮತ್ತು ಸಹನೆಯನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅವರನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಆಗಬೇಕೆಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ಸಗರ ಚಕ್ರವರ್ತಿಯ ಕುಟುಂಬಕ್ಕೆ ಸೇರಿದ ಮಹರ್ಷಿ ಭಗೀರಥರು ಸ್ವಾಭಿಮಾನಿಯಾಗಿ, ಛಲ ಬೀಡದೆ ಹತ್ತಾರು ವರ್ಷಗಳ ಕಾಲ ಶಿವನನ್ನು ಕುರಿತುತಪಸ್ಸು ಮಾಡಿ, ಗಂಗೆಯನ್ನು ಭೂಮಿಗೆ ತಂದು ತಮ್ಮ ಪೂರ್ವಜರಿಗೆ ಸದ್ಗತಿ ದೊರೆಯುವಂತೆ ಮಾಡಿದ ಮಹಾನುಭವ. ಇಂದು ಸಹ ಹಲವು ವರ್ಷಗಳ ನಿರಂತರ ಪ್ರಯತ್ನಕ್ಕೆ ಭಗೀರಥ ಪ್ರಯತ್ನಎಂದು ಕರೆಯುವುದನ್ನು ನಾವು ಕಾಣಬಹುದು.ಅಂದೇ ನೀರಿಗಾಗಿ ಈ ಮಟ್ಟದ ಹೋರಾಟ ನಡೆದಿದೆ. ಹಾಗಾಗಿ ನಾವೆಲ್ಲರೂ ಪರಿಸರ ಸಮತೋಲನಕ್ಕೆ ಮುಂದಾಗಿ, ನೀರನ್ನು ಮಿತವಾಗಿ ಬಳಸುವ ಮೂಲಕ ಮುಂದಿನ ಪೀಳಿಗೆಗೆ ಶುದ್ದ ನೀರು ನೀಡುವುದು ಭಗೀರಥ ಮಹರ್ಷಿಗಳಿಗೆ ನೀಡುವಕೊಡುಗೆ.ಉಪ್ಪಾರ ಸಮುದಾಯವರು ಶೈಕ್ಷಣಿಕವಾಗಿ ಬೆಳೆಯಲು ಎಲ್ಲಾರೀತಿಯಿಂದಲೂ ಮುಂದಾಗಬೇಕು ಎಂದರು.
ತುಮಕೂರು ಜಿಲ್ಲಾ ಉಪ್ಪಾರರ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸುರೇಶಕುಮಾರ್, ಎಸ್. ಮಂಜುನಾಥ್, ರೇಣುಕಯ್ಯ, ಡಾ.ನಾಗೇಶ್, ತಿಪ್ಪೇಸ್ವಾಮಿ, ಕಾರ್ಯದರ್ಶಿ ನಾಗರಾಜು ಇದ್ದರು.


