ಅಪಶಕುನವೇ ನನ್ನ ಬದುಕನ್ನು ಬದಲಾಯಿಸಿ ಸಮಾಜದಲ್ಲಿ ಗುರುತಿಸಿಕೊಳ್ಳುವಂತೆ ಬದುಕನ್ನು ಕಟ್ಟಿಕೊಳ್ಳಲು ನನಗೆ ದಾರಿದೀಪವಾಯಿತು ಎಂದು ವಾಣಿ ಕಿಶನ್ ಪಟ್ನಾಯಕ್ ಹೇಳಿದರು.
ತುಮಕೂರಿನ ಟೌನ್ ಹಾಲ್ ನಲ್ಲಿರುವ ಭಾರತೀಯ ವೈದ್ಯಕೀಯ ಸಂಘದ ಸಭಾಂಗಣದಲ್ಲಿ ಭಾನುವಾರ ಸಮತಾ ಬಳಗದಿಂದ ಹಮ್ಮಿಕೊಂಡಿದ್ದ ಬಿಹಾರದ ಮಾಜಿ ಸಂಸದ ಕಿಶನ್ ಪಟ್ನಾಯಕ್ ಅವರ ಪತ್ನಿ ವಾಣಿ ಅವರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನನಗೆ 10 ವರ್ಷಕ್ಕೆ ಮದುವೆಗೆ ಏರ್ಪಾಡು ಮಾಡಲಾಗಿತ್ತು, ಮದುವೆಯ ದಿನ ನಾನು ಒಲೆಯ ಕೆಂಡವನ್ನು ಆಚೆ ಹಾಕಲು ಹೋಗುವಾಗ ಮದುವೆಗೆ ಹಚ್ಚಲಾಗಿದ್ದ ದೀಪಗಳ ಮೇಲೆ ಬಿದ್ದು ದೀಪಗಳು ಆರಿದವು. ಅಲ್ಲಿದ್ದ ಬಟ್ಟೆಗಳಿಗೆ ಬೆಂಕಿ ತಗುಲಿದ್ದರಿಂದ ಅಪಶಕುನವಾಯಿತೆಂದು ನನ್ನ ಮದುವೆಯನ್ನು ರದ್ದು ಮಾಡಲಾಯಿತು ಎಂದರು.
ನಂತರ ಬ್ಯಾಂಕ್ ಮ್ಯಾನೇಜರ್ ಒಬ್ಬರ ಮೂಲಕ ಪರಿಚಯವಾದ ಕಿಶನ್ ಪಟ್ನಾಯಕ್ ಅವರು ನನ್ನ ಮನೋಭಾವಕ್ಕೆ ಹೊಂದಿಕೊಳ್ಳುತ್ತಾರೆಂದು ಅರಿತು ಇಬ್ಬರೂ ಮದುವೆಯಾದೆವು, ಮದುವೆಯಾದ ನಂತರ ಕಿಶನ್ ಅವರು ನಾವು ಸಮಾಜವಾದಿಗಳಾಗಿರುವುದರಿಂದ ನಮಗೆ ಮಕ್ಕಳಾದರೆ ಸಮಾಜ ಸೇವೆಗೆ ತೊಂದರೆಯಾಗಬಹುದು, ಹಾಗಾಗಿ ನಾವಿಬ್ಬರೂ ಒಪ್ಪಂದದ ಮೇರೆಗೆ ಮಕ್ಕಳನ್ನು ಮಾಡಿಕೊಳ್ಳಲಿಲ್ಲ ಎಂದು ವಿವರಿಸಿದರು.
ಕಿಶನ್ ಪಟ್ನಾಯಕ್ ತುಂಬಾ ಸರಳ ಜೀವಿಯಾಗಿದ್ದರು. ಅವರು ಲೋಕಸಭಾ ಸದಸ್ಯರಾಗಿದ್ದರೂ ಎಂದೂ ಗರ್ವ ಪಡದೆ ಸಾಮಾನ್ಯರಂತೆ ಬದುಕಿದರು. ಅವರು ಸಂಸದರಾಗಿದ್ದಾಗಲೂ ಹೆಗಲಿಗೊಂದು ಬ್ಯಾಗ್ ನೇತಾಕಿಕೊಂಡು ಸಾಮಾನ್ಯರಂತೆ ಸಂಸತ್ತಿಗೆ ಹೋಗುತ್ತಿದ್ದರು, ಅವರು ಎಂದೂ ಅಧಿಕಾರ, ಹಣದ ಹಿಂದೆ ಬಿದ್ದವರಲ್ಲ ಎಂದು ಸ್ಮರಿಸಿಕೊಂಡರು.
ಮಾಜಿ ಅಡ್ವಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಮಾತನಾಡಿ, ಕಿಶನ್ ಪಟ್ನಾಯಕ್ ನನಗೆ ಪರಿಚಯವಾಗಿದ್ದೇ ತುರ್ತುಪರಿಸ್ಥಿತಿ ಕಾಲದಲ್ಲಿ, ನನಗೊಂದು ಟೆಲಿಗ್ರಾಂ ಬಂದಿತು, ಹೈದ್ರಾಬಾದ್ನಿಂದ ಕೃಷ್ಣಪ್ರಸಾದ್ ಎಂಬುವರು ಬರುತ್ತಾರೆ ಕರೆತನ್ನಿ ಅಂತ ಇತ್ತು, ನಾನು ಮೆಜೆಸ್ಟಿಕ್ಗೆ ಹೋಗಿ ಅವರನ್ನು ಕರೆತಂದ ಮೇಲೆಯೇ ಇವರೇ ಸಮಾಜವಾದಿ ಕಿಶನ್ ಪಟ್ನಾಯಕ್ ಎಂದು ತಿಳಿಯಿತು.
ಲೋಹಿಯಾ ಸತ್ತಾಗ ಪಕ್ಷತೀತವಾಗಿ ಕಂಬನಿ ಮಿಡಿದಾಗ ಯಾರು ಈ ವ್ಯಕ್ತಿ ಅನ್ನಿಸಿತು. ಏಕೆಂದರೆ ನಾನು ಆಗ ಆರ್ಎಸ್ಎಸ್ ನಲ್ಲಿದ್ದೆ, ನಾನು ಕಾನೂನು ವಿದ್ಯಾರ್ಥಿಯಾಗಿದ್ದಾಗ ಪ್ರೊ.ನಂಜುಂಡಸ್ವಾಮಿ, ರಾಮಮನೋಹರ ಲೋಹಿಯ ಬಗ್ಗೆ ಪ್ರತಿ ಕ್ಲಾಸ್ನಲ್ಲಿ ಹೇಳುತ್ತಿದ್ದರಿಂದ ಅವರ ಶಿಷ್ಯನಾಗಿ ಲೋಹಿಯಾವಾದಿಯಾದೆ ಎಂದರು.
ಅಧ್ಯಕ್ಷತೆಯನ್ನು ಚಿಂತಕ ಪ್ರೊ.ದೊರೈರಾಜ್ ವಹಿಸಿದ್ದರು, ಲೇಖಕಿ ಮಲ್ಲಿಕಾ ಬಸವರಾಜು ನಿರೂಪಿಸಿ, ಚೇತನಾ ಬಾಲಕೃಷ್ಣ ಸ್ವಾಗತಿಸಿದರು, ಸುರೇನಾ ಕುವೆಂಪು ಗೀತೆ ಹಾಡಿದರು, ವಕೀಲ ಅಖಿಲಾ ಅವರು ವಾಣಿ ಅವರ ಹಿಂದಿಯ ಮಾತುಗಳನ್ನು ಅನುವಾದ ಮಾಡಿದರು.