ತುಮಕೂರು ಜಿಲ್ಲೆಯ ಸಿರಾ ಕ್ಷೇತ್ರದ ಬಿಜೆಪಿ ಶಾಸಕ ರಾಜೇಶ್ ಗೌಡ ದಲಿತರ ಮನೆಯಲ್ಲಿ ಊಟ ಮಾಡಿ ವಾಸ್ತವ್ಯ ಹೂಡಿದ್ದೆ ಎಂದು ಫೇಸ್ಬುಕ್ ಖಾತೆಯಲ್ಲಿ ಚಿತ್ರಸಹಿತ ಮಾಹಿತಿ ಹಂಚಿಕೊಂಡಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ನಿಜವಾಗಿಯೂ ರಾಜೇಶ್ ಗೌಡ ದಲಿತರ ಮನೆಯಲ್ಲಿ ಊಟ ಮಾಡಿದರೆ? ದಲಿತರ ಮನೆಯಲ್ಲಿ ಊಟ ಮಾಡಿದ್ದರೆ ಆ ಮನೆಯವರ ಹೆಸರನ್ನು ಮುಚ್ಚಿಟ್ಟಿದ್ದು ಏಕೆ? ಆ ಕುಟುಂಬದ ಸದಸ್ಯರನ್ನು ಪೋಟೋದಿಂದ ಹೊರಗಿಟ್ಟಿರುವುದು ಏಕೆ? ಇದು ಕೇವಲ ನಾಟಕವೇ? ಎಂಬ ಪ್ರಶ್ನೆಗಳಿಗೆ ಉತ್ತರ ಇಲ್ಲ.
ಕ್ಷೇತ್ರದ ಹಲವು ಮಂದಿ ಶಾಸಕರು ದಲಿತರ ಮನೆಯಲ್ಲಿ ಊಟ ಮಾಡಿರುವುದು ಮತ್ತು ವಾಸ್ತವ್ಯ ಹೂಡಿರುವ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ದಲಿತರ ಮನೆಯಲ್ಲಿ ಶಾಸಕರು ಊಟ ಮಾಡಿದ್ದು ಮತ್ತು ಮಲಗಿದ್ದು ನಿಜವೇ ಆದರೆ ಆ ಕುಟುಂಬದ ಯಜಮಾನರ ಹೆಸರನ್ನು ಪ್ರಟಿಸಬಹುದಿತ್ತು. ಇಡೀ ಕುಟುಂಬದ ಸದಸ್ಯರೊಂದಿಗೆ ಪೋಟೋ ತೆಗೆಸಿಕೊಳ್ಳಬಹುದಿತ್ತು. ಆದರೆ ಇಬ್ಬರು ಮಾತ್ರ ಊಟ ಮಾಡುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ದಲಿತರ ಮನೆಯಲ್ಲಿ ಊಟ ಮಾಡಿದ್ದರೆ ಆ ಕುಟುಂಬದ ಸದಸ್ಯರ ಚಿತ್ರಗಳನ್ನು ಹಂಚಿಕೊಳ್ಳಲು ಮುಜುಗರವೇಕೆ ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ ಜನ.
ಹೌದು ಶಾಸಕರೇ ಫೇಸ್ಬುಕ್ ನಲ್ಲಿ ಬರೆದುಕೊಂಡಿರುವಂತೆ “ಚಿಕ್ಕನಹಳ್ಳಿ ಗ್ರಾಮದ ಎಸ್ಸಿ ಕಾಲೊನಿಯ ದಲಿತ ಕುಟುಂಬದವರ ಮನೆಯಲ್ಲಿ ಊಟ ಮಾಡಿ, ಅವರ ಮನೆಯಲ್ಲೇ ವಾತ್ಸವ್ಯ ಮಾಡುವ ಮುಖಾಂತರ ಬಡವರ ಹಿಂದುಳಿದವರ ದಲಿತರ ಜೊತೆ ಬೆರೆತು ಅವರ ಕಷ್ಟಗಳನ್ನು ಅರಿಯುವ ಪ್ರಯತ್ನ ಮಾಡಿದ್ದೇನೆ” ಎಂದಿದ್ದಾರೆ.
“ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವ ಸಮಾನತೆ ಬಿಂಬಿಸುವ ಸಲುವಾಗಿ ಮತ್ತು ಅಭಿವೃದ್ಧಿ ಹೊರತುಪಡಿಸಿ ಸಮಾಜದೊಂದಿಗೆ ಉತ್ತಮ ಬಾಂಧವ್ಯ ಹೊಂದಲು ನನಗೆ ಇದೊಂದು ಉತ್ತಮ ಅವಕಾಶವಾಗಿದೆ” ಎಂದು ಮುಖ್ಯಮಂತ್ರಿಗಳು, ಬಿಜೆಪಿ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ತಮ್ಮ ಪೋಟೋ ಸಹಿತ ಚಿಕ್ಕ ವರದಿಯನ್ನು ಟ್ಯಾಗ್ ಮಾಡಿದ್ದಾರೆ.
ಶಾಸಕರು ದಲಿತರ ಮನೆಯಲ್ಲಿ ಊಟ ಮಾಡಿರುವುದು ಸತ್ಯವೇ ಆಗಿದ್ದರೆ, ಅಲ್ಲಿಯೇ ವಾಸ್ತವ್ಯ ಮಾಡಿರುವುದು ನಿಜವೇ ಆಗಿದ್ದರೆ ಮನೆಯವರ ಹೆಸರು ಏನೆಂಬುದನ್ನು ಧೈರ್ಯವಾಗಿ ಹೇಳಿಕೊಳ್ಳಬಹುದಿತ್ತು. ಈ ಮಾಹಿತಿಯನ್ನು ಮುಚ್ಚಿಟ್ಟಿದೇಕೆ ಎಂಬ ಪ್ರಶ್ನೆಗಳು ಎಲ್ಲರನ್ನು ಕಾಡತೊಡಗಿವೆ. ಅಲ್ಲದೆ ಕೇವಲ ದಲಿತರ ಮನೆಯಲ್ಲಿ ಊಟ ಮಾಡಿ ಮಲಗುವುದರಿಂದ ಅವರ ಅಭಿವೃದ್ಧಿ ಆಗುವುದಿಲ್ಲ ಎಂದು ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.
ಸಿರಾದ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವ ಭರವಸೆಯ ಮೇಲೆ ಆಯ್ಕೆಯಾದ ಶಾಸಕ ರಾಜೇಶ್ ಗೌಡ ಆ ವಿಷಯವನ್ನೇ ಮರೆತಿದ್ದಾರೆ. ನೀರು ಹರಿಸಲು ಸರ್ಕಾರ ಮೇಲೆ ಒತ್ತಡ ಹಾಕುವ ಬದಲು ಶಾಸಕ ರಾಜೇಶ್ ಗೌಡ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ದಲಿತ ಮನೆಯಲ್ಲಿ ಊಟ ಮಾಡಿದೆ ಎಂದು ನಾಟಕ ಮಾಡುತ್ತಿದ್ದಾರೆ ಎಂಬ ಟೀಕೆಗಳು ವ್ಯಕ್ತವಾಗಿವೆ.