ವಿದ್ಯಾರ್ಥಿ ಯುವಜನರು ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ತಂದೆ, ತಾಯಿ, ಪೋಷಕರು ಹಾಗೂ ಶಿಕ್ಷಕರ ಮೇಲೆ ಗೂಬೆ ಕೂರಿಸುವುದನ್ನು ಬಿಡಬೇಕು. ನಮ್ಮ ಉನ್ನತ್ತಿ ಮತ್ತು ಅಧೋಗತಿ ಎರಡು ನಮ್ಮ ನಡೆವಳಿಕೆಯನ್ನು ಅವಲಂಬಿಸಿರುತ್ತದೆ ಎಂದು ತುಮಕೂರು ವಿವಿ ಕುಲಸಚಿವೆ ನಾಹಿದ ಜಮ್ಹ್ ಜಮ್ಹ್ ತಿಳಿಸಿದ್ದಾರೆ.
ತುಮಕೂರಿನ ಸಿದ್ದಗಂಗಾ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಎಷ್ಟೋ ಮಕ್ಕಳಿಗೆ ಒಳ್ಳೆಯ ಬಟ್ಟೆಯೇ ಇಲ್ಲ ಎನ್ನುವ ಪರಿಸ್ಥಿತಿ ಇರುವಾಗ, ನನಗೆ ಇತರರಂತೆ ದೊಡ್ಡ ಮೊಬೈಲ್ ಕೊಡಿಸಲಿಲ್ಲ. ಬುಲೆಟ್ ಗಾಡಿ ಕೊಡಿಸಲಿಲ್ಲ ಎಂದು ಹಿಯಾಳಿಸುವುದು ತರವಲ್ಲ. ಇದರಿಂದ ನೀವು ಕೀಳರಿಮೆಗೆ ಒಳಗಾಗುವ ಜೊತೆಗೆ, ನಿಮ್ಮ ಪೋಷಕರಿಗೂ ನೋವುಂಟಾಗುವುದರಿಂದ ಮನೆಯ ಅರ್ಥಿಕ, ಶೈಕ್ಷಣಿಕ, ಸಾಮಾಜಿಕ ವಾತಾವರಣಕ್ಕೆ ದೊಡ್ಡ ಪೆಟ್ಟು ಬಿಳಲಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಇಂದು ಎಲ್ಲರೂ ಮೊಬೈಲ್ಗೆ, ಅದರಲ್ಲಿಯೂ ಸೊಷಿಯಲ್ ಮೀಡಿಯಾಗೆ ದಾಸರಾಗಿದ್ದೇವೆ. ಅದರಲ್ಲಿ ನಾವು ದುಖಃದ ವಿಚಾರಗಳಿಗೆ ಹೆಚ್ಚಿನ ಮಹತ್ವ ಕೊಟ್ಟರೆ ಮೊಬೈಲ್ ದುಖಃದ ವಿಚಾರಗಳನ್ನೇ ನಮ್ಮ ಮುಂದಿಡುತ್ತದೆ, ತಮಾಸೆ, ಸುಖದ ವಿಚಾರಗಳು ನಾವು ಯಾವುದಕ್ಕೆ ಅದ್ಯತೆ ನೀಡುತ್ತೇವೆಯೋ ಅಂತಹ ವಿಷಯಗಳ ನಮ್ಮ ಮುಂದೆ ಬರುತ್ತವೆ. ಹಾಗಾಗಿ ಸಾಧ್ಯವಾದಷ್ಟು ಒಳ್ಳೆಯ ವಿಚಾರಗಳ ಕಡೆಗೆ ಗಮನಹರಿಸಿ, ನಿಮ್ಮ ತಂದೆ, ತಾಯಿಗಳ ತ್ಯಾಗವನ್ನು ಅರ್ಥ ಮಾಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.


