ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಮಾಜಿ ಸಚಿವ ವಿ.ಸೋಮಣ್ಣ ಬರುತ್ತಾರೆ ಎಂದು ಹೇಳಿದ್ದು ಯಾರು ಎಂದು ಪ್ರಶ್ನಿಸಿರುವ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಸೋಮಣ್ಣ ಸ್ಪರ್ಧಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತುಮಕೂರಿಗೆ ಟಿಕೆಟ್ ಯಾರಿಗೆ ಕೊಡುತ್ತಾರೆ ಎಂಬ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. ಇಂತಹ ಸಂದರ್ಭದಲ್ಲಿ ತುಮಕೂರಿಗೆ ಸೋಮಣ್ಣ ಬರುತ್ತಾರೆಯೇ ಎಂದು ಕೇಳಿದ್ದಾರೆ.
ಸೋಮಣ್ಣ, ಮೋದಿ ಅವರು ಗುಜರಾತ್ ಬಿಟ್ಟು ವಾರಣಾಸಿಯಲ್ಲಿ ಸ್ಪರ್ಧೆ ಮಾಡಿಲ್ವಾ ಎಂದು ಹೇಳಿದ್ದಾರೆ. ಅದಕ್ಕೆಲ್ಲಾ ನಾವು ಉತ್ತರ ಕೊಡೋಕೆ ಆಗುತ್ತಾ? ಎಂದು ಜೆ.ಸಿ.ಮಾಧುಸ್ವಾಮಿ ಪ್ರಶ್ನಿಸಿದರು.
ನಾನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತನಾಡಿದ್ದೇನೆ. ತುಮಕೂರು ಕ್ಷೇತ್ರದ ಟಿಕೆಟ್ ನನಗೆ ನೀಡುವ ವಿಶ್ವಾಸವಿದೆ. ಆದರೂ ಟಿಕೆಟ್ ಕೊಡುವ ಕುರಿತು ಇದುವರೆಗೂ ತೀರ್ಮಾನವಾಗಿಲ್ಲ ಎಂದು ಹೇಳಿದ್ದಾರೆ.
ತುಮಕೂರು ಕ್ಷೇತ್ರದ ಟಿಕೆಟ್ ಬಗ್ಗೆ ತೀರ್ಮಾನ ಮಾಡುವುದು ಪಕ್ಷದ ಹೈಕಮಾಂಡ್. ಹಾಗಾಗಿ ನನಗೆ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚುನಾವಣೆ ಸಮೀಪಿಸುತ್ತಿದ್ದಂತೆ ನಮ್ಮ ಅಸ್ತಿತ್ವಕ್ಕಾಗಿ ನಾವು ಒಗ್ಗಟ್ಟು ಆಗಲೇಬೇಕು. ಆಗೇ ಆಗುತ್ತೇವೆ. ಗುಡುಗು ಮಿಂಚು ಮೋಡವಾದ ನಂತರ ತಾನೆ ವಾತಾವರಣ ತಿಳಿಯಾಗೋದು. ನಮ್ಮಲ್ಲಿರುವ ವಾತಾವರಣ ತಿಳಿಯಾಗುತ್ತದೆ. ನಾಲ್ಕು ಜನ ಒಗ್ಗಟ್ಟಿನಿಂದ ಇದ್ದರೆ ಒಬ್ಬ ಪಿತೂರಿಗಾಗ ಇದ್ದೇ ಇರ್ತಾನೆ ಎಂದು ಮಾರ್ಮಿಕವಾಗಿ ನುಡಿದರು.
ರಾಜ್ಯಸಭೆಗೆ ಯಾರೂ ನಿರೀಕ್ಷೆ ಮಾಡದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದಾರೆ. ಅದು ಯಾರಿಗೂ ಗೊತ್ತಿರಲಿಲ್ಲ. ಹಾಗೇಯೇ ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ಬಗ್ಗೆ ಇನ್ನೂ ನಿರ್ಧಾರ ಆಗಿಲ್ಲ ಎಂದರು.
ರಾಜಕೀಯದಲ್ಲಿ ಸಮಾಧಾನವಾಗಿದ್ದರೆ ಏನಾದರೂ ಸಾಧಿಸಬಹುದು. ಈ ಮಾತನ್ನು ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಅವರಿಗೆ ಹೇಳಿದ್ದೆ. ಆದರೂ ಮುದ್ದಹನುಮೇಗೌಡ ಯಾಕೆ ಈ ತೀರ್ಮಾನ ತೆಗೆದುಕೊಂಡರೋ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.
ಅವರು ಆತುರ ಬಿದ್ದರು. ಸ್ವಲ್ಪ ಸಮಯ ಕಾಯಬಹುದಿತ್ತು. ಅವರು ಯಾಕೆ ಈ ರೀತಿಯ ತೀರ್ಮಾನ ಕೈಗೊಂಡರು ಎಂಬುದು ನನಗೆ ಗೊತ್ತಿಲ್ಲ. ಅದು ಅವರ ತೀರ್ಮಾನ ಎಂದು ಮಾತ್ರ ಹೇಳಬಲ್ಲೆ ಎಂದು ಹೇಳಿದರು.