ಆಗಸ್ಟ್ 19 ರ ಶನಿವಾರ ಸಂಜೆ 6.45 ಕ್ಕೆ ಗಾಯಗಳು ನಾಟಕ ಆಯೋಜಿಸಿದ್ದು, ನಿರ್ದಿಗಂತ ತಂಟ ಈ ನಾಟಕ ಪ್ರದರ್ಶಿಸುತ್ತಿದೆ ಎಂದು ಝನ್ ಟೀಂ ಮುಖ್ಯಸ್ಥ ಉಗಮ ಶ್ರೀನಿವಾಸ್ ತಿಳಿಸಿದ್ದಾರೆ.
ತುಮಕೂರಿನ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಾಟಕ ಪ್ರದರ್ಶನಗೊಳ್ಳಲಿದ್ದು ನಟ ಪ್ರಕಾಶ್ ರೈ ಉದ್ಘಾಟಿಸುವರು. ನಾಟಕ ವೀಕ್ಷಿಸಲು 50 ರೂಪಾಯಿ ಪ್ರವೇಶ ದರ ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಇಡಿಯ ಜಗತ್ತು ಯುದ್ದದ ಉನ್ಮಾದದಿಂದ ನರಳುತ್ತಿದೆ. ರಾಜಕಾರಣಿಗಳ, ಧರ್ಮಗುರುಗಳ, ಮಾರುಕಟ್ಟೆಯ ದಲ್ಲಾಳಿಗಳ ಕೈಗಳು ಲೇಡಿಮ್ಯಾಕ್ ಬೆತ್ ಳ ಕೈಗಳಂತೆ ಎಷ್ಟು ತೊಳೆದರೂ ತೊಡೆಯಲಾಗದ ರಕ್ತದ ಕಲೆಗಳಿಂದ ತೊಯ್ದಿದೆ.ಪುರುಷಾಹಂಕಾರದ ಈ ಗಾಯಗಳು ಮೇದಿನಿ ಮತ್ತು ಮಾನಿನಿಯರ ಕರುಳ ಕತ್ತರಿಸುತ್ತಿದೆ ಎಂದು ಹೇಳಿದ್ದಾರೆ.
ಮನುಷ್ಯರನ್ನೇ ವಿಭಜಿಸುವ ಮನುಷ್ಯತ್ವವನ್ನೇ ಅಣಕಿಸುವ ವರ್ಣಭೇದವಂತೂ ಇನ್ನೂ ಕ್ರೂರ. ಇವು ನಮಗೆ ನಾವೇ ಮಾಡಿಕೊಂಡ ಗಾಯಗಳು. ಇವುಗಳಿಗೆ ಮುಖಾಮುಖಿಯಾಗದೇ ನಮಗೆ ಬಿಡುಗಡೆಯಿಲ್ಲ. ಅಸಂಖ್ಯಾತ ಗಾಯಗಳ ಕಥೆಗಳವೆ ಈ ನೆಲದ ತುಂಬ, ಅವುಗಳಿಂದ ಯುದ್ಧ ಹಾಗೂ ಕೋಮುಹಿಂಸೆಯ ಕಥನಗಳಲ್ಲಿ ಕೆಲವನ್ನು ಆಯ್ದು ಇಲ್ಲಿ ರಂಗಚಿತ್ರವಾಗಿಸುತ್ತಿದ್ದೇವೆ ಮತ್ತು ಅವು ಸಹಜವಾಗಿಯೇ ಮಹಿಳೆಯರ ನೋವಿನ ಸೊಲ್ಲುಗಳಾಗಿ ಪರಿಣಮಿಸಿವೆ ಎಂದು ತಿಳಿಸಿದ್ದಾರೆ.
ನಮ್ಮಿಂದ ಎಣಿಸಲಾದಷ್ಟು ಗಾಯದ ಕಥೆಗಳವೆ. ಇಲ್ಲಿ ಎಣಿಸಲಾಗದ ಅಸಂಖ್ಯ ಕಥೆಗಳ ಬಗೆಗೂ ಸಹಾನುಭೂತಿ, ಸಂತಾಪಗಳಿವೆ. ಇಲ್ಲಿ ಕಥೆಗಳವೆ, ಕವನಗಳಿವೆ. ನಾಟಕದ ಆಯ್ದಭಾಗಗಳಿವೆ, ಕಾದಂಬರಿಯ ಪುಟಗಳವೆ. ಗೋಡೆಯ ಮೇಲೆ ಸುಣ್ಣದಲ್ಲಿ ಬರೆದಿತ್ತು.”ಅವರಿಗೆ ಬೇಕಾಗಿದೆ ಯುದ್ಧ’ ಅದನ್ನು ಬರೆದವನಾಗಲೇ ಹತನಾಗಿದ್ದಾನೆ ಎಂದು ಬ್ರೆಕ್ಟ್ ಹೇಳಿದ್ದಾನೆ ಎಂದು ಉಗಮ ಶ್ರೀನಿವಾಸ್ ಹೇಳಿದ್ದಾರೆ.