ಇವತ್ತಿನ ದಿನಗಳಲ್ಲಿ ನಮ್ಮ ಸರ್ಕಾರ ಅಭಿವೃದ್ಧಿಯ ಹೆಸರಿನಲ್ಲಿ ಪರಿಸರ ನಾಶ ಮಾಡುತ್ತಿದೆ. ಸಾವಿರಾರು ಕೋಟಿ ಖರ್ಚು ಮಾಡಿ ಮೇಕೆದಾಟು ಅಣೆಕಟ್ಟು ಕಟ್ಟಲು ಹೊರಟಿದೆ. ಇದು ತಪ್ಪು. ಮೇಕೆದಾಟು ಯೋಜನೆಯಿಂದ ಅಲ್ಲಿನ ಸುಂದರ ಪ್ರಕೃತಿ ಮುಳುಗಡೆಯಾಗುವ ಜೊತೆಗೆ ಜೀವ ವೈವಿಧ್ಯತೆಗೆ ಧಕ್ಕೆ ಬರುತ್ತದೆ ಎಂದು ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸಾ ಆತಂಕ ವ್ಯಕ್ತಪಡಿಸಿದ್ದಾರೆ.
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕು ಸಂತೆಮಾವತ್ತೂರು ಗೊಲ್ಲರಹಟ್ಟಿಯ ಜುಂಜಪ್ಪ ಕಾವಲಿನಲ್ಲಿ ಕಾಡುಗೊಲ್ಲ ಜುಂಜಪ್ಪನ ಕಾವಲು ಸಂರಕ್ಷಣಾ ಸಮಿತಿ ಎನ್.ಎಸ್.ಎಸ್ ಘಟಕ ಮತ್ತು ಅರಣ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾಡುಗೊಲ್ಲ ಜುಂಜಪ್ಪ ಒಬ್ಬ ಪಶುಪಾಲಕನಾಗಿದ್ದು ಅವನ ಪರಂಪರೆ ಕರ್ನಾಟಕದ ಬಯಲು ಸೀಮೆಗಳಾದ ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹಬ್ಬಿದೆ. ಜುಂಜಪ್ಪನ ಕುರುಹು ಇರುವುದೇ ಇಂತಹ ಕಾವಲುಗಳಲ್ಲಿ. ಆದ್ದರಿಂದ ನಾವು ಅತ್ಯಂತ ಜೋಪಾನವಾಗಿ ಇದನ್ನು ಉಳಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಶಿವರಾಜ್ ಕುಮಾರ್ ಅಭಿನಯದ ವೇಧ ಚಲನಚಿತ್ರ ಗಾಯಕ ಮೋಹನ್ ಕುಮಾರ್ ಅವರು ಕಾಡುಗೊಲ್ಲ ಜುಂಜಪ್ಪನ ಕಗ್ಗದ ಪದಗಳನ್ನು ಹಾಡಿದರು. ಬಳಿಕ ಮಾತನಾಡಿದ ಅವರು, ನಮ್ಮ ಬುಡಕಟ್ಟು ಪರಂಪರೆಯ ಜನರು ತಮ್ಮ ಮೌಖಿಕ ಪರಂಪರೆಯನ್ನು ಇಂತಹ ಕಾವಲುಗಳಲ್ಲಿಯೇ ಕಟ್ಟಿದ್ದಾರೆ. ಇದನ್ನು ನಾವು ಮುಂದಿನ ತೆಲೆಮಾರಿಗೆ ಸಾಗಿಸಬೇಕಿದೆ ಎಂದರು.
ಸಾಮಾಜಿಕ ಚಿಂತಕ ಉಜ್ಜಜ್ಜಿ ರಾಜಣ್ಣ ಮಾತನಾಡಿ, ಬಯಲು ಸೀಮೆಯ ಸಸ್ಯ ಸಂಪತ್ತು ಮತ್ತು ಜೀವ ವೈವಿಧ್ಯತೆ ಸಂರಕ್ಷಿಸಬೇಕು ಎಂದು ಹೇಳಿದರು.
ಕಾಡುಗೊಲ್ಲ ಜುಂಜಪ್ಪನ ಕಾವಲು ಸಂರಕ್ಷಣಾ ಸಮಿತಿಯ ಮುಖಂಡ ಜಿ.ಕೆ. ನಾಗಣ್ಣ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ವಕೀಲ ಎಸ್.ಎಚ್. ಸಿಂಗಯ್ಯ, ಉಪನ್ಯಾಸಕ ಶಿವಲಿಂಗಯ್ಯ, ಎನ್ಎಸ್ಎಸ್ ಅಧಿಕಾರಿ ಹನುಮಂತಪ್ಪ ನಾಗಮ್ಮ ಅರಣ್ಯ ಅಧಿಕಾರಿ ತಾರಕೇಶ್ವರಿ, ಪಾರೀಸ್ಟರ್ ಮೋಹನ್, ಸಿಳ್ಳೇಖ್ಯಾತ ಸಮುದಾಯದ ಲಕ್ಷ್ಮೀ ನರಸಿಂಹ, ಸೋಲಿಗ ಸಮುದಾಯದ ಹೊನ್ನಪ್ಪ, ಇರುಳಿಗ ಸಮುದಾಯದ ರತ್ನಗಿರಿ, ಶೋಷಿತ ಸಮುದಾಯಗಳ ವೇದಿಕೆಯ ಶಿವರಾಜು, ಜಯಣ್ಣ , ಚಿಕ್ಕಣ್ಣ, ಹಟ್ಟಿ ಶಿವರಾಜು, ಧನಂಜಯ್ಯ ವಿ.ಎಸ್ ಕನ್ನಡ ಹೋರಾಟ ಜ್ಞಾನ ಮಧು, ಗ್ರಾ.ಪಂ ಅಧ್ಯಕ್ಷೆ ಹೇಮಾಬಾಯಿ, ಗ್ರಾ.ಪಂ ಸದಸ್ಯ ಮಂಜುನಾಥ ಶಶಿಕುಮಾರ್ ಇದ್ದರು.