ತುಮಕೂರಿನ ಹಂದಿಜೋಗಿ ಕುಟುಂಬಗಳಿಗೆ ನಗರದ 4 ಕಿಲೋ ಮೀಟರ್ ಸಮೀಪದಲ್ಲಿ ಭೂಮಿ ಹುಡುಕಿ ವಿಶೇಷ ಪ್ರಕರಣವೆಂದು ಪರಿಗಣಿಸಿ ಪುನರ್ ವಸತಿಗೊಳಿಸಬೇಕು ಎಂದು ಸಚಿವ ಡಾ.ಜಿ.ಪರಮೇಶ್ವರ್ ಜಿಲ್ಲಾಧಿಕಾರಿಗಳು ಹಾಗೂ ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚಿಸಿದ್ದಾರೆ.
ತುಮಕೂರು ನಗರದ ಬಡ್ಡಿಹಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಹಾಗೂ ಇಸ್ಮಾಯಿಲ್ ನಗರ ನಾಗರಿಕರ ಹಿತರಕ್ಷಣಾ ಸಮಿತಿ ವತಿಯಿಂದ ಹಿಂದಿಜೋಗಿ ಕುಟುಂಬಗಳಿಗೆ ಪುನರ್ ವಸತಿ ಮತ್ತು ಮೂಲಸೌಕರ್ಯ ನೀಡುವಂತೆ ಸಲ್ಲಿಸಿದ ಮನವಿಗೆ ಅವರು ಪ್ರತಿಕ್ರಿಯಿಸಿ ಮಾತನಾಡಿದರು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಶ್ರೀನಿವಾಸ್, ಹೊನ್ನೇನಹಳ್ಳಿಯಲ್ಲಿ ನಿರ್ಮಾಣಕ್ಕೆ ಸಿದ್ದವಾಗಿರುವ ಪಿಎಂಎವೈ ಯೋಜನೆಯಡಿ 192ಜಿ ಬಹುಮಹಡಿ ವಸತಿ ಸಮುಚ್ಛಯಗಳಲ್ಲಿ ಹಂದಿಜೋಗರ 60 ಕುಟುಂಬಗಳಿಗೆ ಪುನರ್ ವಸತಿಗೊಳಿಸಲು ತೀರ್ಮಾನಿಸಲಾಗಿತ್ತು. ಆದರೆ ಈ ಸಮುದಾಯದವರು ಜೀವನಾಧಾಋಇತ ಕಸುಬುಗಳಿಗೆ ತೊಂದರೆ ಉಂಟಾಗುತ್ತದೆ. ಇದರಿಂದ ಬಹುಮಹಡಿ ವಸತಿ ಸಮುಚ್ಚಯ ಬೇಡವೆಂದು ತಿಳಿಸಿದ್ದಾರೆ. ಇವರ ಜೀವನಾಧಾರಿತ ಕುಲಕಸುಬುಗಳಿಗೆ ಪೂರಕವಾಗಿ ನಗರದ ಸಮೀಪದಲ್ಲಿ ನಿವೇಶನ ಹುಡುಕಿ ನೀಡಲು ತುರ್ತು ಕ್ರಮ ವಹಿಸಲಾಗುವುದು ಎಂದು ಹೇಳಿದ್ದಾರೆ.