ರಾಜ್ಯದಲ್ಲಿ ಶಿಕ್ಷಣ ಇಲಾಖೆಯಲ್ಲಿ 8000 ಶಾಲಾ ಕೊಠಡಿ ನಿರ್ಮಾಣ, 17000 ಶಿಕ್ಷಕರ ನೇಮಕ ಯಾವುದೇ ಹಗರಣ ಮಾಡದೇ ನೇಮಕ ಮಾಡಲಾಗಿದೆ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಅರ್ಜಿ ಹಾಕದವರಿಗೂ ಶಿಕ್ಷಕರ ನೇಮಕ ಮಾಡಿ ಭ್ರಷ್ಟಾಚಾರ ಮಾಡಿದ್ದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ತುಮಕೂರು ಜಿಲ್ಲೆಯ ತಿಪಟೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಸಿ. ನಾಗೇಶ್ ಪರ ಕೆಬಿ ಕ್ರಾಸ್ ಬಳಿ ರೋಡ್ ಶೋ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಅವಧಿಯಲ್ಲಿ ಎಸ್ಸಿ ಎಸ್ಟಿ ವಿದ್ಯಾರ್ಥಿಗಳ ಹಾಸಿಗೆ ದಿಂಬಿನಲ್ಲಿಯೂ ಲಂಚಾವತಾರ ಮಾಡಿದರು. ಪೊಲೀಸ್ ನೇಮಕಾತಿ ಯಲ್ಲಿಯೂ ಹಗರಣ ಮಾಡಿದರು ಎಂದು ಆಪಾದಿಸಿದರು.
ಯಡಿಯೂರಪ್ಪ ಮುಖ್ಯಮಂತ್ರಿ ಆದಾಗ ಭಾಗ್ಯ ಲಕ್ಷ್ಮಿ ಯೊಜನೆ ಜಾರಿಗೆ ತಂದಿದ್ದಾರೆ. ಇದರಿಂದ ಶೇ 30 ರಷ್ಟು ಅಲ್ಪ ಸಂಖ್ಯಾತ ಮಹಿಳೆಯರಿಗೆ ಅನುಕುಲವಾಗಿದೆ. ಕೇಂದ್ರದ ಕಿಸಾನ್ ಸಮ್ಮಾನ್ ಯೋಜನೆಗೆ ಯಡಿಯೂರಪ್ಪ ಅವರು 4000 ರೂ. ಸೇರಿಸಿ ಕೊಡುವ ಕೆಲಸ ಮಾಡಿದ್ದಾರೆ. ರೈತ ವಿದ್ಯಾನಿಧಿ, ಎಸ್ಸಿ ಎಸ್ಟಿ ಸಮುದಾಯಕ್ಕೆ 75 ಯುನಿಟ್ ಉಚಿತ ವಿದ್ಯುತ್ , ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಯೋಜನೆಯನ್ನು ನಾವು ಜಾರಿಗೆ ತಂದಿದ್ದೇವೆ ಎಂದು ಹೇಳಿದರು.
ಬಿ ಸಿ ನಾಗೇಶ್ ಅವರನ್ನು 25 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲ್ಲಿಸಿಕೊಂಡು ಬರಬೇಕು. ಹೇಮಾವತಿ ನಿರು ತರುವ ಕೆಲಸ ಮಾಡಿದ್ದಾರೆ. ಅವರು ಸಾಕಷ್ಟು ಅನುದಾನ ತಂದಿದ್ದಾರೆ. ಅವರನ್ನು ಗೆಲ್ಲಿಸಿ ರಾಜ್ಯದಲ್ಲಿ ಮತ್ತೆ ಕಮಲ ಅರಳಿಸಿ ಎಂದು ಹೇಳಿದರು.