ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರ ತಮ್ಮ ವೈಫಲ್ಯಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಹಿಂದುಳಿದ ವರ್ಗಗಳ ಬಗ್ಗೆ ಮಾತನಾಡುತ್ತಿದ್ದಾರೆ. ಅವರಿಗೆ ಹಿಂದುಳಿದವರು, ದಲಿತರ ಬಗ್ಗೆ ಕಾಳಜಿ ಇರುವುದು ನಿಜವೇ ಆದರೆ ಶೇ.50ರಷ್ಟು ನಿಗದಿ ಮಾಡಿರುವ ಮೀಸಲಾತಿ ಮಿತಿಯನ್ನು ತೆರವುಗೊಳಿಸಲಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮೋದಿ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ಕೋಲಾರದಲ್ಲಿ ನಡೆದ ಜೈ ಭಾರತ ಯಾತ್ರೆ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್ ಗಾಂಧಿ ಅವರು, ಮೋದಿ ಅವರ ಸರ್ಕಾರದಲ್ಲಿ ಕಾರ್ಯದರ್ಶಿಗಳ ಮಟ್ಟದ ಅಧಿಕಾರಿಗಳ ಪೈಕಿ ಕೇವಲ 7ರಷ್ಟು ಮಾತ್ರ ಹಿಂದುಳಿದವರು, ದಲಿತರು ಇದ್ದಾರೆ. ಇದು ಮೋದಿ ಅವರ ಕಾಳಜಿಯೇ? ಯುಪಿಎ ಸರ್ಕಾರ 2011ರಲ್ಲಿ ಜಾತಿ ಗಣತಿ ಮಾಡಿಸಿದ್ದು, ಅದರ ಪ್ರಕಾರ ದೇಶದಲ್ಲಿ ಹಿಂದುಳಿದ ವರ್ಗಗಳು ಹಾಗೂ ದಲಿತರ ಜನಸಂಖ್ಯೆ ಎಷ್ಟಿದೆ? ಎಂದು ಬಹಿರಂಗಪಡಿಸಲಿ ಎಂದು ಹೇಳಿದರು.
ಮುಂದಿನ ಕೆಲ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಈ ಸರ್ಕಾರ ರಾಜ್ಯದ ಯುವಕರು, ಮಹಿಳೆಯರು, ಬಡವರಿಗಾಗಿ ಏನು ಮಾಡಲಿದೆ ಎಂದು ಹೇಳುತ್ತೇನೆ. ಇತ್ತೀಚೆಗೆ ನಡೆದ ಹಿಮಾಚಲ ಪ್ರದೇಶದ ಚುನಾವಣೆ ನಂತರ ಜನರಿಗೆ ಯಾವ ಕಾರ್ಯಕ್ರಮ ನೀಡಬಹುದು ಎಂದು ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು ನನ್ನನ್ನು ಕೇಳಿದರು. ಆಗ ನಾನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟದಲ್ಲಿ ಎರಡು ಮೂರು ಭರವಸೆಗಳನ್ನು ಜಾರಿಗೆ ತರಬೇಕು. ಈ ಯೋಜನೆ ಜಾರಿ ಮಾಡಲು ವರ್ಷಾನುಗಟ್ಟಲೆ ಕಾಲಹರಣ ಮಾಡಬಾರದು. ಸರ್ಕಾರ ಬಂದ ಕೂಡಲೇ ಅವುಗಳನ್ನು ಅನುಷ್ಠಾನಕ್ಕೆ ತರಲು ಸೂಚಿಸಿದೆ. ಇದನ್ನು ನಾನು ರಾಜ್ಯ ಕಾಂಗ್ರೆಸ್ ನಾಯಕರಿಗೆ ಹೇಳಬಯಸುತ್ತೇನೆ ಎಂದರು.
ನಾವು ಕರ್ನಾಟಕ ಜನರಿಗೆ 4 ಗ್ಯಾರಂಟಿ ಯೋಜನೆ ನೀಡಿದ್ದೇವೆ. ಗೃಹಜ್ಯೋತಿ ಯೋಜನೆ ಮೂಲಕ ಪ್ರತಿ ತಿಂಗಳು 200 ಯುನಿಟ್ ವಿದ್ಯುತ್ ಉಚಿತ ನೀಡುವುದು. ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ಪ್ರೋತ್ಸಾಹ ಧನ. ಅನ್ನಭಾಗ್ಯದ ಮೂಲಕ ಬಡ ಕುಟುಂಬದ ಪ್ರತಿ ಸದಸ್ಯರಿಗೆ ತಲಾ 10 ಕೆ.ಜಿ. ಅಕ್ಕಿ ನೀಡಲಾಗುವುದು. ಇನ್ನು ಯುವನಿಧಿ ಯೋಜನೆ ಮೂಲಕ ಪ್ರತಿ ತಿಂಗಳು ನಿರುದ್ಯೋಗ ಪಧವೀದರರಿಗೆ 3 ಸಾವಿರ, ಡಿಪ್ಲೋಮಾ ಪದವಿಧರರಿಗೆ 1500 ನೀಡಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯದ ಕಾಂಗ್ರೆಸ್ ಪಕ್ಷ ಜನರಿಗೆ ನೇರ ಸಂದೇಶ ರವಾನಿಸಬೇಕು. ಪ್ರಧಾನಮಂತ್ರಿಗಳಿಗೆ ಸಂದೇಶ ರವಾನೆಯಾಗಬೇಕು. ಪ್ರಧಾನಮಂತ್ರಿಗಳು ಅದಾನಿಯಂತಹ ಉದ್ಯಮಿಗಳಿಗೆ ಸಾವಿರಾರು ಕೋಟಿ ಹಣ ನೀಡುವುದಾದರೆ, ನಾವು ಕೂಡ ದೇಶದ ಜನರಿಗೆ ಕಾರ್ಯಕ್ರಮಗಳನ್ನು ನೀಡಲು ಸಾಧ್ಯವಿದೆ. ನೀವು ಹೃದಯಪೂರ್ವಕವಾಗಿ ಅದಾನಿ ಅವರಿಗೆ ನೆರವು ನೀಡಿದರೆ, ನಾವು ಬಡ ಜನರು, ರೈತರು, ಮಹಿಳೆಯರು, ಯುವಕರಿಗೆ ಸಹಾಯ ಮಾಡುತ್ತೇವೆ. ನೀವು ನಿಮ್ಮ ಕೆಲಸ ಮಾಡಿ, ನಾವು ನಮ್ಮ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಏನು ಮಾಡಿದೆ? 40ರಷ್ಟು ಕಮಿಷನ್ ತಿಂದಿದ್ದಾರೆ. ಕೆಲಸ ಆಗಬೇಕಾದರೆ ರಾಜ್ಯದ ಜನರ ಲೂಟಿ ಮಾಡಿದೆ. ಅವರು ಮಾಡಿರುವ ಎಲ್ಲ ಕೆಲಸಕ್ಕೂ 40% ಕಮಿಷನ್ ತಿಂದಿದ್ದಾರೆ. ಈ ವಿಚಾರ ನನ್ನ ಆರೋಪವಲ್ಲ. ಗುತ್ತಿಗೆದಾರರ ಸಂಘದ ಅಧ್ಯಕ್ಷರು ಪ್ರಧಾನಮಂತ್ರಿಗಳಿಗೆ ಪತ್ರ ಬರೆದು ಈ ಆರೋಪ ಮಾಡಿದ್ದಾರೆ. ಪ್ರಧಾನಮಂತ್ರಿಗಳು ಈ ಪತ್ರಕ್ಕೆ ಇದುವರೆಗೂ ಯಾವುದೇ ಉತ್ತರ ನೀಡಿಲ್ಲ. ಅವರ ಮೌನ ಈ ಸರ್ಕಾರ 40% ಸರ್ಕಾರ ಎಂದು ಒಪ್ಪಿಕೊಂಡಂತಾಗಿದೆ ಎಂದರು.