ಮೂರು ಕೃಷಿ ಕರಾಳ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಮತ್ತು ಕ್ವಿಂಟಾಲ್ ಕೊಬ್ಬರಿಗೆ 20 ಸಾವಿರ ಬೆಂಬಲ ಬೆಲೆ ನೀಡಿ ಖರೀದಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ಸರ್ಕಾರವು ಪ್ರತಿ ಕ್ವಿಂಟಾಲ್ ಕೊಬ್ಬರಿಗೆ 5 ಸಾವಿರ ರೂಪಾಯಿ ಸಹಾಯಧನ ನೀಡಬೇಕು. ಸರಿಯಾದ ಸರಾಸರಿ ಗುಣಮಟ್ಟ ನಿಗದಿ ನಿಯಮದಂತೆಯೇ ಕೊಬ್ಬರಿ ಖರೀದಿ ಮಾಡಿದ 72 ಗಂಟೆಯೊಳಗೆ ರೈತರ ಖಾತೆಗೆ ಹಣವನ್ನು ವರ್ಗಾಯಿಸಬೇಕು. ತಪ್ಪಿದಲ್ಲಿ ಮೂರು ತಿಂಗಳ ಒಳಗೆ ತಿಂಗಳಿಗೆ ಕನಿಷ್ಠ ಶೇ.5ರಂತೆ ಬಡ್ಡಿ ಸೇರಿಸಿ ಹಣವನ್ನು ಸಂದಾಯ ಮಾಡಬೇಕು ಎಂದು ಪ್ರತಿಭಟನ ನಿರತ ರೈತರು ಪ್ರತಿಭಟನೆ ನಡೆಸಿದರು.
ಸರ್ಕಾರ ಕೊಬ್ಬರಿ ಮತ್ತು ರಾಗಿಯನ್ನು ಖರೀದಿ ಮಾಡುವಾಗ ಗರಿಷ್ಟ ಖರೀದಿ ನಿಯಮವನ್ನು ಕೈಬಿಡಬೇಕು. ರೈತರು ಬೆಳೆದು ತಂದ ಉತ್ಪನ್ನವನ್ನು ಸಂಪೂರ್ಣವಾಗಿ ಖರೀದಿ ಮಾಡಬೇಕು ಎಂದರು.
ಸರ್ಕಾರವು ನೆಫೆಡ್ ಮೂಲಕ ಖರೀದಿ ಮಾಡಿದ ಕೊಬ್ಬರಿಯನ್ನು ಮತ್ತೆ ಮಾರುಕಟ್ಟೆಗೆ ಬಿಡದೆ ಉಪ ಉತ್ಪನ್ನ ಮಾಡಿ ಮಾರಾಟ ಮಾಡಲು ಪ್ರೋತ್ಸಾಹಿಸಬೇಕು. ರೈತರಿಗೆ ಉತ್ತಮ ಗುಣಮಟ್ಟದ ಕೊಬ್ಬರಿ ಉತ್ಪಾದಿಸಲು ಕೊಬ್ಬರಿ ಮೇಲಟ್ಟ ನಿರ್ಮಿಸಲು ಸರ್ಕಾರವು ಪ್ರತಿ ನೂರು ಮರಕ್ಕೆ 1 ಲಕ್ಷ ರೂಪಾಯಿಗಳ ಪ್ರೋತ್ಸಾಹ ಧನ ನೀಡಬೇಕು ಎಂದು ಆಗ್ರಹಿಸಿದರು.
ಪಡಿತರ ಆಹಾರ ಧಾನ್ಯದ ಜೊತೆಗೆ ಪಾಮ್ ಆಯಿಲ್ ಬದಲು ಕೊಬ್ಬರಿ ಎಣ್ಣೆ ಕೊಡಬೇಕು. ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ವಿತರಿಸುವ ರಾಗಿಯನ್ನು ಸರ್ಕಾರವು ಯಾವುದೇ ವ್ಯಾಪಾರಿಗಳಿಂದ ಖರೀದಿ ಮಾಡದೆ ಎಂಎಸ್.ಪಿ ಮೂಲಕ ರೈತರಿಂದ ನೇರವಾಗಿ ಖರೀದಿಸಿ ವಿತರಿಸಬೇಕು ಎಂದು ಹೇಳಿದರು.
ಕೃಷಿ ಉತ್ಪನ್ನಗಳ ಮೇಲಿನ ಶೇ.18 ಹಾಗೂ 28ರಷ್ಟು ಜಿಎಸ್.ಟಿ. ಹೇರಿಕೆಯನ್ನು ತಡೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಹಿರಿಯ ರೈತ ನಾಯಕರಾದ ಕೆ.ಟಿ.ಗಂಗಾಧರ್, ಬಡಗಲಪುರ ನಾಗೇಂದ್ರ, ಚಾಮರಸ ಪಾಟೀಲ್, ಡಾ.ಸಿದ್ದನಗೌಡ ಪಾಟೀಲ್, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ಯೋಗೀಶ್ವರಸ್ವಾಮಿ, ಮಹೇಶ್ ಪ್ರಭು, ಯಶವಂತ್, ಸಿ.ಯತಿರಾಜ್ ಮೊದಲಾದವರು ಭಾಗವಹಿಸಿದ್ದರು.