ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಪ್ರತಿಷ್ಠಾನ ನೀಡುವ ‘ರಾಜಲಕ್ಷ್ಮಿ ಬರಗೂರು’ ಪ್ರಶಸ್ತಿಗೆ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ದೊಡ್ಡಬಾಣಗೆರೆ ಕಾಡುಗೊಲ್ಲರ ಹಟ್ಟಿಯ ಜನಪದ ಹಾಡುಗಾರ್ತಿ ಮಾರಕ್ಕ ಸಣ್ಣಚಿತ್ತಯ್ಯ ಅವರು ಆಯ್ಕೆಯಾಗಿದ್ದಾರೆ. ಮಾರ್ಚ್ 12ರಂದು ಬೆಂಗಳೂರಿನಲ್ಲಿ ಸಮಾರಂಬ ನಡೆಯಲಿದ್ದು, ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಕುಂಟ ಈರಪ್ಪ ಮತ್ತು ದಂಪತಿ ಪುತ್ರಿಯಾದ ಮಾರಕ್ಕ ಅವರ ಹುಟ್ಟೂರು ಹೆಂಜೇರು. ಹೊಲ, ಗದ್ದೆ, ಕುಟ್ಟುವ, ಬೀಸುವ ಕೆಲಸಗಳಲ್ಲದೆ, ಮದುವೆ ಉತ್ಸವಗಳಲ್ಲಿ ಹಿರಿಯರು ಹಾಡುತ್ತಿದ್ದ ಹಾಡುಗಳಿಂದ ಪ್ರೇರೇಪಿತಗೊಂಡ ಮಾರಕ್ಕ ತಮ್ಮ ತಂಗಿಯರೊಂದಿಗೆ ಹೋಗಿ ಊರವರ ಮದುವೆಗಳಲ್ಲಿಯೂ ಸೋಬಾನೆ ಹಾಡುಗಳನ್ನು ಹಾಡಿದ್ದಾರೆ.
ಹೆಂಜೇರಪ್ಪ, ಕಾಟಯ್ಯ, ಜುಂಜಪ್ಪ, ಚಿತ್ತರಲಿಂಗ, ಗೌರಸಂದ್ರ ಮಾರಮ್ಮ ಮೊದಲಾದ ಕುಲದೇವತೆಗಳ ಮೇಲಿನ ಪದಗಳಲ್ಲದೆ ಇತರೆ ಬಿಡಿ ಹಾಡುಗಳು, ಗಾದೆ, ಒಗಟು ಮತ್ತು ಹಾಸ್ಯಕ್ಕೆ ಸಂಬಂಧಿಸಿದ ಹಾಡುಗಳನ್ನು ಹಾಡಬಲ್ಲವರಾಗಿದ್ದಾರೆ.
72 ವರ್ಷ ವಯಸ್ಸಿನ ಮಾರಕ್ಕ ಅವರ ಹಾಡುಗಾರ್ತಿಯನ್ನು ಗುರುತಿಸಿ ಹಲವು ಸಂಘ-ಸಂಸ್ಥೆಗಳು ಸನ್ಮಾನಿಸಿ ಗೌರವ ನೀಡಿವೆ.
ಕರ್ನಾಟಕ ಜಾನಪದ ಅಕಾಡೆಮಿಯು 2008ರ ಸಾಲಿನ ಕಲಾವಿದ ಪ್ರಶಸ್ತಿಯನ್ನು ನೀಡಿ ಮಾರಕ್ಕ ಅವರನ್ನು ಪುರಸ್ಕರಿಸಿದೆ.
ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಪ್ರತಿಷ್ಠಾನ ಮಾರ್ಚ್ 12ರಂದು ಬೆಂಗಳೂರಿನ ಸೆಂಟ್ರಲ್ ಕಾಲೇಜು ಎದುರಿನ ಸರ್ಕಾರಿ ಕಲಾ ಕಾಲೇಜು ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮಾರಕ್ಕ ಅವರಿಗೆ ರಾಜಲಕ್ಷ್ಮಿ ಬರಗೂರು ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿ, ಗೌರವಿಸಲಿದೆ ಎಂದು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ.ಎ.ವಿ.ಲಕ್ಷ್ಮೀನಾರಾಯಣ ತಿಳಿಸಿದ್ದಾರೆ.