ಭಾಷಾ ರಾಜಕಾರಣ ದೇಶದಲ್ಲಿ ಗಂಭೀರ ಸ್ವರೂಪ ಪಡೆದಿದೆ. ಹಿಂದಿ ಪಡಾವೋ ಎಂದು ಹೇಳುವ ಮೂಲಕ ಪ್ರಬಲ ಭಾಷೆಗಳನ್ನು ಪ್ರೋತ್ಸಾಹಿಸುತ್ತಿರುವ ಸರ್ಕಾರಗಳು ಸಣ್ಣ ಭಾಷೆಗಳನ್ನು ವಿನಾಶದತ್ತ ನೂಕುತ್ತಿವೆ ಎಂದು ಸಾಹಿತಿ ಪುರುಷೋತ್ತಮ ಬಿಳಿಮಲೆ ಆತಂಕ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಸಾಹಿತ್ಯ ಉತ್ಸವದ 11ನೇ ಆವೃತ್ತಿಯಲ್ಲಿ ಸಣ್ಣ ಭಾಷೆಗಳ ಸಬಲೀಕರಣ ಗೋಷ್ಟಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭಾರತದ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಇರುವ 22 ಭಾಷೆಗಳಲ್ಲಿ 18 ಭಾಷೆಗಳು ಉತ್ತರ ಭಾರತದ್ದಾಗಿವೆ. ದಕ್ಷಿಣ ಭಾರತದ 4 ಭಾಷೆಗಳಿಗೆ ಮಾತ್ರ ಸ್ಥಾನ ಸಿಕ್ಕಿದೆ. ಇದೊಂದು ಅಪಾಯಕಾರಿಯಾದ ಪ್ರಾದೇಶಿಕ ಅಸಮತೋಲನವಾಗಿದೆ. ತುಳು, ಕೊಡವದಂತಹ ನೂರಾರು ಸಣ್ಣ ಭಾಷೆಗಳ ಮುಂದೆ ಇಂದು ಹಲವಾರು ಸವಾಲುಗಳಿವೆ ಎಂದು ಪ್ರಜಾವಾಣಿ ಪತ್ರಿಕೆ ವರದಿ ಮಾಡಿದೆ.
2011ರ ಜನಗಣತಿಯ ಪ್ರಕಾರ ಭಾರತದಲ್ಲಿ 19,569 ಮಾತೃಭಾಷೆಗಳಿವೆ. 99 ಭಾಷೆಗಳು ಸಂವಿಧಾನದ ಎಂಟನೇ ಪರಿಚ್ಛೇದ ಸೇರಲು ಹೋರಾಟ ನಡೆಸುತ್ತಿವೆ. ಆದರೆ ಸರ್ಕಾರಗಳು ಭಾಷಾ ಬಲವರ್ಧನೆಯ ಬಗ್ಗೆ ಆಸಕ್ತಿ ಹೊಂದಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಯಾವುದೇ ಭಾಷೆ ರಾಜ್ಯದ ಅಧಿಕೃತ ಭಾಷೆಯೆಂದು ಘೋಷಣೆಯಾದ ಬಳಿಕ ಸಹಜವಾಗಿ ಎಂಟನೇ ಪರಿಚ್ಛೇದಕ್ಕೆ ಸೇರುತ್ತದೆ. ಆದರೆ 2003ರಲ್ಲಿ ಭಾರತದ ಸಂವಿಧಾನದಲ್ಲಿ 92ನೇ ಬದಲಾವಣೆ ಮಾಡಿ ಯಾವುದೇ ರಾಜ್ಯದ ಅಧಿಕೃತ ಭಾಷೆಗಳಲ್ಲದ ಬೋಡೋ, ಡೋಗ್ರಿ, ಸಂತಾಲಿ ಮತ್ತು ಮೈಥಿಲಿ ಭಾಷೆಯನ್ನು ಸೇರಿಸಲಾಯಿತು. ಇದು ಭಾಷಾ ರಾಜಕೀಯಕ್ಕೆ ಉತ್ತಮ ಉದಾಹರಣೆ ಎಂದರು.
ಸಣ್ಣ ಭಾಷೆಗಳ ಅಭಿವೃದ್ಧಿಯ ಕುರಿತು ರಾಜ್ಯ ಸರ್ಕಾರವಾಗಲೀ, ಕೇಂದ್ರ ಸರ್ಕಾರವಾಗಲೀ ಗಂಭೀರವಾಗಿ ಯೋಚಿಸುತ್ತಿಲ್ಲ. 2001ರ ಜನಗಣತಿ ಪ್ರಕಾರ 1.66 ಲಕ್ಷ ಮಂದಿ ಕೊಡವ ಭಾಷೆಯನ್ನು ಮಾತನಾಡುತ್ತಿದ್ದರು. ಆ ಸಂಖ್ಯೆ 2011ರ ಜನಗಣತಿ ಪ್ರಕಾರ 1.36 ಲಕ್ಷಕ್ಕೆ ಇಳಿಕೆಯಾಗಿದೆ. ಸಮುದಾಯ, ಭಾಷೆ ಅವನತಿಯ ಹಾದಿ ಹಿಡಿದಿರುವುದನ್ನು ಇದು ತೋರಿಸುತ್ತದೆ ಎಂದು ಹೇಳಿದರು.