ತುಮಕೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಬರುವ ಕಾಲೇಜುಗಳು ಹಾಗೂ ಹಾಸ್ಟೆಲ್ಗಳಲ್ಲಿನ ಸಮಸ್ಯೆಗಳನ್ನು ಬಗೆಹರಿಸುವ ಕುರಿತು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಕುಲಪತಿಗಳ ಜೊತೆ ಚರ್ಚೆ ನಡೆಸಿದರು.
ತುಮಕೂರು ವಿವಿ ಕುಲಪತಿಗಳ ಕಚೇರಿಗೆ ನಿಯೋಗದಲ್ಲಿ ತೆರಳಿದ ಮುರಳೀಧರ ಹಾಲಪ್ಪ, ವಿವಿ ವ್ಯಾಪ್ತಿಗೆ ಒಳಪಡುವ ಕಾಲೇಜು ಹಾಗೂ ಹಾಸ್ಟೆಲ್ಗಳಲ್ಲಿ ಹಲವು ಸಮಸ್ಯೆಗಳಿವೆ. ಅವುಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ವಿಶ್ವವಿದ್ಯಾಲಯ ಹಾಗೂ ಪ್ರಥಮ ದರ್ಜೆ ಕಾಲೇಜುಗಳನ್ನು ಪುನರುತ್ಥಾನಗೊಳಿಸುವುದು, ವಿಶ್ವವಿದ್ಯಾಲಯದಲ್ಲಿ ಕ್ರೀಡಾಪಟುಗಳ ಶೈಕ್ಷಣಿಕ ಹಾಗೂ ಕ್ರೀಡೆಯ ಖರ್ಚು ಭರಿಸಿ ದತ್ತು ಪಡೆಯುವ ಪದ್ಧತಿ ಆರಂಭಿಸಬೇಕು. ಪ್ರತಿಭೆಗಳನ್ನು ಗುರುತಿಸಿ ಸಾಧಕರಿಗೆ ಅನುದಾನ ನೀಡಬೇಕು. ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ಖಾಲಿ ಇರುವ ಕ್ರೀಡಾ ಬೋಧಕರ ಹಾಗೂ ಇತರೆ ಹುದ್ದೆಗಳ ನೇಮಕಕ್ಕೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಉದ್ಯೋಗ ಹಾಗೂ ಕೌಶಲ್ಯ ತರಬೇತಿ ಕೇಂದ್ರ ಸ್ಥಾಪಿಸುವುದರ ಜೊತೆಗೆ ಕ್ಯಾಂಪಸ್ಗಳಲ್ಲಿ ಉದ್ಯೋಗ ಸಂದರ್ಶನ ಮೇಳಗಳನ್ನು ಆಯೋಜಿಸಬೇಕು. ವಿದ್ಯಾರ್ಥಿ ನಿಲಯಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ, ಓವರ್ ಲೋಡ್ ಸಮಸ್ಯೆ, ವಿದ್ಯಾರ್ಥಿ, ವಿದ್ಯಾರ್ಥಿನಿಯರ ತಣ್ಣೀರು ಸ್ನಾನ, ಕಿಟಕಿಗಳಿಲ್ಲದೆ ಚಳಿ, ಸೊಳ್ಳೆ ಕಾಟಕ್ಕೆ ರಾತ್ರಿಯಿಡೀ ಜಾಗರಣೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿದ್ಯಾರ್ಥಿಗಳು ದೂರುತ್ತಿದ್ದು ಕೂಡಲೇ ಗಮನ ಹರಿಸಬೇಕೆಂದು ಮನವಿ ಮಾಡಿದರು.
ನಾಲ್ಕು ಕುಲಪತಿಗಳ ಅವಧಿ ಮುಗಿದರೂ ವಿಶ್ವವಿದ್ಯಾಲಯ ಕ್ಯಾಂಪಸ್ ನಿರ್ಮಾಣ ಪೂರ್ಣವಾಗಿಲ್ಲ, ವಿಶ್ವವಿದ್ಯಾಲಯಕ್ಕೆ ಪ್ರತ್ಯೇಕ ಕ್ಯಾಂಪಸ್ ನಿರ್ಮಾಣ ಮಾತ್ರ 18 ವರ್ಷ ಪೂರೈಸುತ್ತಾ ಬಂದರೂ ಪೂರ್ಣಗೊಂಡಿಲ್ಲ. ನಾಗವಲ್ಲಿ ಬಳಿ ಬಿದರೆಕಟ್ಟೆ ಕಾವಲ್ ನಲ್ಲಿ 240 ಎಕರೆ ವಿಶ್ವವಿದ್ಯಾಲಯ ಕ್ಯಾಂಪಸ್ಗೆ ಜಾಗ ಮಂಜೂರು ಮಾಡಿದ್ದರೂ ಯಾವುದೇ ಅಭಿವೃದ್ಧಿ ಕೆಲಸಗಳು ಆರಂಭವಾಗಿಲ್ಲ ಎಂದು ಹೇಳಿದರು.